ನವದೆಹಲಿ: ವಿಧಾನಸಭೆಯನ್ನು ವಿಸರ್ಜಿಸಿ, ದೆಹಲಿಯನ್ನು ಸಂಪೂರ್ಣ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸುವ ಚಿಂತನೆಯಲ್ಲಿ ಕೇಂದ್ರ ಸರ್ಕಾರ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಆ ರೀತಿಯ ಯಾವುದೇ ಪ್ರಕ್ರಿಯೆಯು ಇಲ್ಲಿನ ಜನರಿಂದ ತೀವ್ರ ಪ್ರತಿರೋಧಕ್ಕೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ದೆಹಲಿ ವಿಧಾನಸಭೆಯ ಚಲಿಗಾಲದ ಅಧಿವವೇಶನದ ಎರಡನೇ ದಿನ ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ದೆಹಲಿಯಲ್ಲಿ ಚುನಾವಣೆ ನಡೆಯುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಹೇಳಿದರು.
‘ಅವರು(ಬಿಜೆಪಿ) ದೆಹಲಿಯನ್ನು ಸಂಪೂರ್ಣ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸುತ್ತಾರೆ. ಹಾಗಾಗಿ, ಮುಂದಿನ ಚುನಾವಣೆ ಇರುವುದಿಲ್ಲ ಎಂಬ ಮಾತುಗಳಿವೆ. ಕೇಜ್ರಿವಾಲ್ ಅನ್ನು ದ್ವೇಷಿಸುವ ಮೂಲಕ ನೀವು ದೇಶವನ್ನು ದ್ವೇಷಿಸಲು ಶುರುಮಾಡಿದ್ದೀರಿ’ಎಂದು ಬಿಜೆಪಿ ಶಾಸಕರನ್ನು ಉದ್ದೇಶಿಸಿ ಕೇಜ್ರಿವಾಲ್ ಕಿಡಿಕಾರಿದರು.
‘ಕೇಜ್ರಿವಾಲ್ ಮುಖ್ಯವಲ್ಲ. ದೇಶ ಮುಖ್ಯ. ಅದನ್ನು ಮರೆಯವೇಡಿ’ಎಂದು ಅವರು ಹೇಳಿದರು.
‘ಅವರು(ಬಿಜೆಪಿ) ಆಮ್ ಆದ್ಮಿ ಪಕ್ಷವನ್ನು ಕಂಡು ಭಯಪಡುತ್ತಿದ್ದಾರೆ. ಹಾಗಾಗಿ, ಅವರಿಗೆ ಚುನಾವಣೆ ಬೇಕಿಲ್ಲ. ಕೇಜ್ರಿವಾಲ್ ಬರುತ್ತಾರೆ ಹೋಗುತ್ತಾರೆ. ಕೇಜ್ರಿವಾಲ್ ಮುಖ್ಯವಲ್ಲ. ಸಂವಿಧಾನ ಮೀರಿ ಚುನಾವಣೆ ನಡೆಸುವುದನ್ನು ನಿಲ್ಲಿಸಿದರೆ ಅದು ದೇಶದ ನಾಶಕ್ಕೆ ನಾಂದಿಯಾಗುತ್ತದೆ’ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಮ್ ಆದ್ಮಿಯನ್ನು ನಿಯಂತ್ರಿಸಲು ಸಾಧ್ಯವಾಗದ ಬಿಜೆಪಿ ದೆಹಲಿ ವಿಧಾನಸಭೆ ವಿಸರ್ಜನೆಯ ಚಿಂತನೆ ನಡೆಸಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ದೆಹಲಿಯನ್ನು ಸಂಪೂರ್ಣ ಕೇಂದ್ರಾಡಳಿತ ಪ್ರದೇಶವಾಗಿ ಮಾಡಲಗುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳುತ್ತಿದ್ದಾರೆ. ಅದೇ ಆದರೆ ವಿಧಾನಸಭೆ ವಿಸರ್ಜನೆಯಾಗುತ್ತದೆ. ಇದನ್ನು ನೋಡಿಕೊಂಡು ದೆಹಲಿ ಜನ ಸುಮ್ಮನೆ ಕೂರುವುದಿಲ್ಲ. ಬೀದಿಗಿಳಿದು ಹೋರಾಟ ಮಾಡುತ್ತಾರೆ’ಎಂದು ಅವರು ಹೆಳಿದರು.
ದೆಹಲಿ ಸರ್ಕಾರದ ಬಗ್ಗೆ ಭಯ ಹೊಂದಿರುವ ಬಿಜೆಪಿ ಸಿಬಿಐ, ಇಡಿ ಮತ್ತು ಪೊಲಿಸರನ್ನು ನಮ್ಮ ಮಂತ್ರಿಗಳು ಮತ್ತು ಶಾಸಕರ ಹಿಂದೆ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.