ADVERTISEMENT

ಉತ್ತರ ಪ್ರದೇಶದಲ್ಲಿ ರೈಲ್ವೆ ಪೊಲೀಸರಿಂದ ಪತ್ರಕರ್ತನ ಮೇಲೆ ಮೂತ್ರ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 17:08 IST
Last Updated 12 ಜೂನ್ 2019, 17:08 IST
   

ಶಾಮ್ಲಿ: ಉತ್ತರ ಪ್ರದೇಶದಲ್ಲಿ ನ್ಯೂಸ್‌ 24 ಸುದ್ದಿ ವಾಹಿನಿಯ ವರದಿಗಾರನಿಗೆ ರೈಲ್ವೆ ಪೊಲೀಸರು ಥಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಉತ್ತರ ಪ್ರದೇಶದಲ್ಲಿ ಪತ್ರಕರ್ತರ ಮೇಲಿನ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು ಮಂಗಳವಾರ ರಾತ್ರಿನ್ಯೂಸ್‌ 24 ಸುದ್ದಿ ವಾಹಿನಿಯ ವರದಿಗಾರ ಅಮಿತ್ ಶರ್ಮಾ ಮೇಲೆ ರೈಲ್ವೆ ಪೊಲೀಸರು ದಾಳಿ ನಡೆಸಿ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆಅಮಿತ್‌ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ. ಶಾಮ್ಲಿಯಲ್ಲಿ ಗೂಡ್ಸ್‌ ರೈಲು ಹಳಿ ತಪ್ಪಿತ್ತು, ಈ ವೇಳೆ ಸ್ವಳದಲ್ಲಿ ವರದಿಗಾರಿಕೆ ಮಾಡುವುದನ್ನು ರೈಲ್ವೆ ಪೊಲೀಸರು ತಡೆದರು. ರೈಲಿನ ಚಿತ್ರಿಕರಣಕ್ಕೂ ಅವಕಾಶ ಕೊಡದೆ ನಮ್ಮ ಬಳಿ ಇದ್ದ ಕ್ಯಾಮೆರಾ ಮತ್ತು ಮೊಬೈಲ್‌ ಫೋನ್‌ಗಳನ್ನು ಕಸಿದುಕೊಂಡರು.

ADVERTISEMENT

ಈ ದೌರ್ಜನ್ಯವನ್ನು ಖಂಡಿಸಿದ್ದಕ್ಕೆ ನನ್ನ ಮೇಲೆ ದಾಳಿ ಮಾಡಿಬಲವಂತವಾಗಿ ಮೂತ್ರ ಕುಡಿಸಿದರು ಎಂದು ಅಮಿತ್ ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ.

ಸಮವಸ್ತ್ರ ಧರಿಸಿಲ್ಲದ ಕೆಲ ರೈಲ್ವೆ ಪೊಲೀಸರು ನಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಮಿತ್ ಶರ್ಮಾ ಹೇಳಿದ್ದಾರೆ.

ಪತ್ರಕರ್ತರ ಪ್ರತಿಭಟನೆ: ಅಮಿತ್ ಶರ್ಮಾ ಮೇಲಿನ ದಾಳಿ ಖಂಡಿಸಿ ನೂರಾರು ಪತ್ರಕರ್ತರು ಶಾಮ್ಲಿ ಜಿಲ್ಲಾ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು ತಪ್ಪಿತಸ್ಥ ರೈಲ್ವೆ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಮಾನತು: ಅಮಿತ್ ಶರ್ಮಾ ಮೇಲೆ ದಾಳಿ ಮಾಡಿರುವ ಮೂವರು ರೈಲ್ವೆ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.ಅಮಿತ್ ಶರ್ಮಾ ಮೇಲಿನ ದಾಳಿಯ ವಿಡಿಯೊವನ್ನು ಪರಿಶೀಲಿಸಿ, ಘಟನಾ ಸ್ಥಳದಲ್ಲಿದ್ದ ರೈಲ್ವೆ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.