ನವದೆಹಲಿ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಚುನಾವಣಾ ಕಾರ್ಯತಂತ್ರ ನಿರೂಪಕ ಪ್ರಶಾಂತ್ ಕಿಶೋರ್, ‘ಅವಸರದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸುವ ಮೂಲಕ ಜನರ ಜೀವವನ್ನು ಅಪಾಯಕ್ಕೆ ಒಡ್ಡಬಾರದು. ಈಗ ನಾವು ಕೋವಿಡ್ನ ವಿರುದ್ಧ ಹೋರಾಡಬೇಕೇ ವಿನಾ ಚುನಾವಣೆಯ ಬಗ್ಗೆ ಚಿಂತಿಸಬಾರದು’ ಎಂದಿದ್ದಾರೆ.
‘ದೇಶದ ಇತರ ಹಲವು ರಾಜ್ಯಗಳಂತೆ ಬಿಹಾರವೂ ಕೋವಿಡ್ನಿಂದಾಗಿ ಭಾರಿ ಸಂಕಷ್ಟ ಎದುರಿಸುತ್ತಿದೆ. ಆದರೆ ಸರ್ಕಾರಿ ಯಂತ್ರದ ಬಹುದೊಡ್ಡ ಭಾಗವು ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ನಿರತವಾಗಿದೆ. ನಿತೀಶ್ ಅವರೇ, ಇದು ಚುನಾವಣೆಗೆ ಸ್ಪರ್ಧಿಸುವ ಸಮಯವಲ್ಲ, ಕೊರೊನಾ ವೈರಸ್ ವಿರುದ್ಧ ಈಗ ಸ್ಪರ್ಧಿಸಬೇಕಾಗಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಒಂದು ಕಾಲದಲ್ಲಿ ನಿತೀಶ್ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಅವರು, ನಿತೀಶ್ ವಿರುದ್ಧ ಹೇಳಿಕೆಗಳನ್ನು ನೀಡಲು ಆರಂಭಿಸಿದ ನಂತರ ಜೆಡಿಯುದಿಂದ ಉಚ್ಚಾಟನೆಗೊಂಡಿದ್ದರು. ವಿಧಾನಸಭಾ ಚುನಾವಣೆಗಳನ್ನು ಮುಂದೂಡುವಂತೆ ಆರ್ಜೆಡಿ, ಎಲ್ಜೆಪಿ ಮುಂತಾದ ಪಕ್ಷಗಳು ಈಗಾಗಲೇ ಒತ್ತಾಯಿಸಿದ್ದು, ಈ ಒತ್ತಾಯಕ್ಕೆ ಈಗ ಪ್ರಶಾಂತ್ ಕಿಶೋರ್ ಅವರೂ ಧ್ವನಿಗೂಡಿಸಿದ್ದಾರೆ. ಬರುವ ಅಕ್ಟೋಬರ್– ನವೆಂಬರ್ ವೇಳೆಗೆ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಬೇಕಾಗಿದ್ದು, ಆ ಬಗ್ಗೆ ಚುನಾವಣಾ ಆಯೋಗ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.