ಚೆನ್ನೈ: ಮಿಚಾಂಗ್ ಚಂಡಮಾರುತದ ಪರಿಣಾಮ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಂಟಾಗಿದ್ದ ಪ್ರವಾಹ ನಿಯಂತ್ರಣಕ್ಕೆ ಬರಲು ನಾಲ್ಕು ದಿನ ಬೇಕಾಗಿದ್ದು ಏಕೆ ಎಂಬ ಬಗ್ಗೆ ತಮಿಳುನಾಡು ಸರ್ಕಾರ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಶನಿವಾರ ಒತ್ತಾಯಿಸಿದರು.
ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸತತ ನಾಲ್ಕು ದಿನ ನಗರವು ಜಲಾವೃತವಾಗಿರುವುದು ಮತ್ತು ನಿಧಾನಗತಿಯಲ್ಲಿ ನೀರು ಇಂಗುತ್ತಿರುವುದಕ್ಕೆ ಕಾರಣ ಏನೆಂದು ಪತ್ತೆ ಮಾಡಲು ತಕ್ಷಣವೇ ತನಿಖೆ ನಡೆಸಬೇಕು’ ಎಂದರು.
ಜನರ ಬದುಕು ಮತ್ತು ನದಿ ತೀರದ ಪ್ರದೇಶಗಳಲ್ಲಿರುವ ಮನೆಗಳ ಸ್ಥಿರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈನಲ್ಲಿನ ಬೆಳವಣಿಗೆ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದಾರೆ ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿಯೊಬ್ಬರ ನಾಗರಿಕರಿಗೂ ಅಗತ್ಯ ನೆರವು ನೀಡಲು ಬದ್ಧರಾಗಿದ್ದಾರೆ’ ಎಂದು ತಿಳಿಸಿದರು.
ಚೆನ್ನೈ ನಗರವು ಪದೇ ಪದೇ ಪಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿದೆ. ಆದರೆ ಜನಪ್ರತಿನಿಧಿಗಳು ‘ಪ್ರವಾಹ ಮುಕ್ತ’ವನ್ನಾಗಿ ಮಾಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕನಿಷ್ಠ ಇನ್ನೈದು ವರ್ಷಗಳಾದರೂ ಈ ಬಿಕ್ಕಟ್ಟು ಪುನರಾವರ್ತನೆಯಾಗಬಾರದು. ಇದಕ್ಕಾಗಿ ದೀರ್ಘಾವಧಿಯ ಯೋಜನೆಯೊಂದನ್ನು ರೂಪಿಸಬೇಕು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.