ADVERTISEMENT

ದೆಹಲಿಯ ಅಶೋಕ್ ವಿಹಾರದಲ್ಲಿ ಗುಂಪು ಘರ್ಷಣೆ: ಇಬ್ಬರು ಸಾವು

ದೆಹಲಿಯ ಅಶೋಕ್ ವಿಹಾರದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2023, 9:00 IST
Last Updated 10 ಅಕ್ಟೋಬರ್ 2023, 9:00 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ವಾಯುವ್ಯ ದೆಹಲಿಯ ಅಶೋಕ್ ವಿಹಾರ ಪ್ರದೇಶದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟು, ಮತ್ತೋರ್ವ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎಂದು ದೆಹಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ನಿನ್ನೆ (ಸೋಮವಾರ) ರಾತ್ರಿ ಘರ್ಷಣೆ ನಡೆದಿದೆ. ಮೃತರನ್ನು ರಘು ಮತ್ತು ಭೂರಾ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಇವರಿಬ್ಬರು ತಮ್ಮ ಸಹಚರರೊಂದಿಗೆ ಅಶೋಕ್ ವಿಹಾರದಲ್ಲಿರುವ ರವಿಕಾಂತ್ ಅಲಿಯಾಸ್ ಡಬ್ಲು ಅವರನ್ನು ಭೇಟಿ ಮಾಡಲು ಬಂದಿದ್ದರು.

ADVERTISEMENT

ರಘು ಡಬ್ಲುವನ್ನು ಡಬ್ಲು ಭಾಯ್ ಎಂದು ಕರೆಯಲು ನಿರಾಕರಿಸಿದಾಗ ಜಗಳ ಆರಂಭವಾಗಿದೆ. ಬಳಿಕ ಡಬ್ಲು ಸಹಚರರು ರಘು ಮೇಲೆ ಗುಂಡು ಹಾರಿಸಿ ಸ್ಥಳದಲ್ಲಿಯೇ ಹತ್ಯೆ ಮಾಡಿದ್ದಾರೆ. ಅಲ್ಲದೇ ರಾಘು ‌‌ಸಹಚರ ಭುರಾನನ್ನು ಕೂಡ ಕೊಲೆಗೈದಿದ್ದಾರೆ. ಇನ್ನು ಡಬ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ರಘು, ಭೂರಾ ಮತ್ತು ಡಬ್ಲು ವಿರುದ್ಧ ಈ ಹಿಂದೆ ವಿವಿಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳಲ್ಲಿ ಒರ್ವನನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದ್ದು, ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.