ADVERTISEMENT

ಕೇರಳ| ರೈಲಿಗೆ ನುಗ್ಗಿ ಬೆಂಕಿ ಇಟ್ಟ ಆಗಂತುಕ: ಮೂವರು ಸಾವು, 9 ಮಂದಿಗೆ ಸುಟ್ಟ ಗಾಯ

ಪಿಟಿಐ
Published 3 ಏಪ್ರಿಲ್ 2023, 5:02 IST
Last Updated 3 ಏಪ್ರಿಲ್ 2023, 5:02 IST
   

ಕೋಯಿಕ್ಕೋಡ್‌: ಕೇರಳದ ಕೋಯಿಕ್ಕೋಡ್‌ನಲ್ಲಿ ಭಾನುವಾರ ತಡರಾತ್ರಿ ಚಲಿಸುತ್ತಿದ್ದ ರೈಲಿನ ಬೋಗಿಯೊಂದಕ್ಕೆ ನುಗ್ಗಿದ ಆಗಂತುಕನೊಬ್ಬ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಒಂಬತ್ತು ಮಂದಿಗ ಸುಟ್ಟ ಗಾಯಗಳಾಗಿವೆ.

ಭಾನುವಾರ ರಾತ್ರಿ 9.30ರ ಸುಮಾರಿನಲ್ಲಿ ಅಲಪ್ಪುವ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.

ಕಣ್ಣೂರು ಜಿಲ್ಲೆಯ ಮಹಿಳೆ, ಸುಮಾರು ಎರಡು ವರ್ಷದ ಹೆಣ್ಣು ಮಗು ಮತ್ತು ಇನ್ನೊಬ್ಬ ವ್ಯಕ್ತಿಯ ಮೃತದೇಹಗಳು ರೈಲು ಹಳಿಯ ಮೇಲೆ ಪತ್ತೆಯಾಗಿವೆ. ಗಾಯಗೊಂಡಿರುವ 9ಮಂದಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಅವರಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ADVERTISEMENT

ಅಪರಿಚಿತ ವ್ಯಕ್ತಿಯೊಬ್ಬ ಪೆಟ್ರೋಲ್ ತರಹದ ದ್ರವ ತುಂಬಿದ್ದ ಎರಡು ಬಾಟಲಿಗಳೊಂದಿಗೆ ‘ಡಿ1’ ಕೋಚ್‌ಗೆ ನುಗ್ಗಿ ಪ್ರಯಾಣಿಕರು ಮತ್ತು ರೈಲಿನ ಬೋಗಿಗೆ ಅದನ್ನು ಚೆಲ್ಲಿ, ಬೆಂಕಿ ಹಚ್ಚಿದ ಎಂದು ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ತಿಳಿಸಿದ್ದಾರೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಕೆಲ ಪ್ರಯಾಣಿಕರು ರೈಲಿನ ಚೈನ್ ಎಳೆದರು. ರೈಲು ನಿಂತಿದ್ದರಿಂದ ಆರೋಪಿ ಪರಾರಿಯಾದ. ಆತನಿಗೂ ಸುಟ್ಟ ಗಾಯಗಳಾಗಿರುವ ಶಂಕೆ ವ್ಯಕ್ತವಾಗಿದೆ.

ಬೆಂಕಿ ಹೊತ್ತಿಕೊಳ್ಳುತ್ತಲೇ ರೈಲಿನಿಂದ ಹಾರಿ ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸೋಮವಾರ ಮುಂಜಾನೆ ಹಳಿಗಳ ಮೇಲೆ ಹುಡುಕಾಟ ನಡೆಸಿದಾಗ ಅವರ ಮೃತದೇಹಗಳು ಪತ್ತೆಯಾಗಿವೆ.

ಆರೋಪಿ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಕೋಯಿಕ್ಕೋಡ್ ನಗರ ಪೊಲೀಸ್ ಕಮಿಷನರ್ ರಾಜ್‌ಪಾಲ್ ಮೀನಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.