ನವದೆಹಲಿ (ಪಿಟಿಐ): ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ (ಐಆರ್ಎಫ್) ಅನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸುವ ಕೇಂದ್ರದ ನಿರ್ಧಾರ ಕುರಿತು ನಿಲುವು ತಿಳಿಸಬೇಕು ಎಂದು ಅದರ ಮುಖ್ಯಸ್ಥ ಝಾಕೀರ್ ನಾಯ್ಕ್ ಅವರಿಗೆ ಕಾನೂನುಬಾಹಿರ (ಚಟುವಟಿಕೆ) ನಿಯಂತ್ರಣ ಕಾಯ್ದೆ (ಯುಎಪಿಎ) ನ್ಯಾಯಮಂಡಳಿಯು ತಿಳಿಸಿದೆ.
ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ನೇತೃತ್ವದ ಏಕಸದಸ್ಯರ ನ್ಯಾಯಮಂಡಳಿಯು ಈ ಬಗ್ಗೆ ನೋಟಿಸ್ ಜಾರಿ ಮಾಡಿತು. ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರವನ್ನು ಪ್ರತಿನಿಧಿಸಿದ್ದರು.
ಐಆರ್ಎಫ್ ಕಾನೂನುಬಾಹಿರ ಸಂಸ್ಥೆ ಎಂದು ಐದು ವರ್ಷದ ಅವಧಿಗೆ ಕೇಂದ್ರ ನ.15ರಂದು ಘೋಷಿಸಿತ್ತು. ಕಾಯ್ದೆಯ ಸೆಕ್ಷನ್ 5 (1)ರ ಅನ್ವಯ ಈ ಘೋಷಣೆಗೆ ಪೂರಕವಾದ ಅಂಶಗಳನ್ನು ಪರಿಶೀಲಿಸಲು ಏಕಸದಸ್ಯ ನ್ಯಾಯಮಂಡಳಿಯನ್ನು ರಚಿಸಿತ್ತು.
ಈ ಹಿಂದೆಯೂ ನವೆಂಬರ್ 2016ರಲ್ಲಿ ಐಆರ್ಎಫ್ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿದ್ದು, ಇದನ್ನು ಯುಎಪಿಎ ನ್ಯಾಯಮಂಡಳಿಯು ಮೇ 2017ರಲ್ಲಿ ದೃಢಪಡಿಸಿತ್ತು. ನಿಷೇಧಾಜ್ಞೆ ಅವಧಿಯು ಕಳೆದ ನವೆಂಬರ್ 16ರಂದು ಅಂತ್ಯಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.