ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಕುರಿತು ‘ಬಿಬಿಸಿ’ ಸುದ್ದಿವಾಹಿನಿ ಪ್ರಕಟಿಸಿರುವ ವಿಡಿಯೊವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
‘ಇಂದು ದೇಶದಲ್ಲಿ ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮುತ್ತಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ. ಇದರಿಂದ ದೂರ ಸರಿಯುವುದು ಎಂದರೆ ಹತ್ತಿಯಿಂದ ಬೆಂಕಿಯನ್ನು ಮುಚ್ಚಲು ಪ್ರಯತ್ನಿಸಿದಂತೆ’ ಎಂದು ಬಿಜೆಪಿಯ ಯುವ ಸಂಸದ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು, ಕೃಷಿ ಕಾಯ್ದೆ ಮತ್ತು ಇತರ ವಿಚಾರಗಳ ಕುರಿತು ವರಣ್ ಗಾಂಧಿ ಟೀಕಾಪ್ರಹಾರ ನಡೆಸುತ್ತಲೇ ಇದ್ದಾರೆ.
ರೈಲ್ವೆ ನೇಮಕಾತಿ ಪ್ರಕ್ರಿಯೆ ವಿರುದ್ಧ ಉತ್ತರ ಪ್ರದೇಶ ಮತ್ತು ಬಿಹಾರದ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ವರಣ್ ಗಾಂಧಿ ಅವರ ನಿರುದ್ಯೋಗದ ಕುರಿತ ಟ್ವೀಟ್ ಮಹತ್ವ ಪಡೆದುಕೊಂಡಿದೆ.
ವರುಣ್ ಹಂಚಿಕೊಂಡಿರುವ ವಿಡಿಯೊದಲ್ಲಿ, ಯುವಕನೊಬ್ಬ ನಿರುದ್ಯೋಗದ ಬಗ್ಗೆ ಮಾತನಾಡಿದ್ದಾನೆ. ರೈಲ್ವೆ ನೇಮಕಾತಿ ವಿರುದ್ಧದ ಪ್ರತಿಭಟನೆಯನ್ನು ಸರ್ಕಾರ ನಿರ್ವಹಿಸಿದ ರೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ನಿರುದ್ಯೋಗದ ಸಮಸ್ಯೆಯನ್ನು ಪರಿಹರಿಸದಿದ್ದರೆ ಅಧಿಕಾರದಲ್ಲಿ ಇರುವವರನ್ನು ಬದಲಾಯಿಸಬೇಕಾಗುತ್ತದೆ ಎಂದೂ ಯುವಕ ಎಚ್ಚರಿಕೆ ನೀಡಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.