ADVERTISEMENT

ಕೋವಿಡ್-19‌ ವಿರುದ್ಧದ ಹೋರಾಟದಲ್ಲಿ ಕರ್ನಾಟಕದ ಆಶಾ ಕಾರ್ಯಕರ್ತೆಯರ ಕೊಡುಗೆ ಅನನ್ಯ

ಕೇಂದ್ರ ಆರೋಗ್ಯ ಸಚಿವಾಲಯ ಮೆಚ್ಚುಗೆ

ಪಿಟಿಐ
Published 3 ಜುಲೈ 2020, 13:39 IST
Last Updated 3 ಜುಲೈ 2020, 13:39 IST
ಗ್ರಾಮವೊಂದರಲ್ಲಿ ಆಶಾ ಕಾರ್ಯಕರ್ತೆಯರು ಮನೆಗೆ ತೆರಳಿ ಸಮೀಕ್ಷೆ ನಡೆಸಿದರು (ಸಾಂದರ್ಭಿಕ ಚಿತ್ರ)
ಗ್ರಾಮವೊಂದರಲ್ಲಿ ಆಶಾ ಕಾರ್ಯಕರ್ತೆಯರು ಮನೆಗೆ ತೆರಳಿ ಸಮೀಕ್ಷೆ ನಡೆಸಿದರು (ಸಾಂದರ್ಭಿಕ ಚಿತ್ರ)   

ನವದೆಹಲಿ: ಕರ್ನಾಟಕದಲ್ಲಿ ಕೋವಿಡ್‌–19 ಪ್ರಸರಣ ತಡೆಗಟ್ಟುವಲ್ಲಿ ಆಶಾ (ಮಾನ್ಯತೆ ಪಡೆದ ಸಾಮಾಜಿಕ ಮತ್ತು ಆರೋಗ್ಯ ಕಾರ್ಯಕರ್ತರು– ಎಎಸ್‌ಎಚ್‌ಎ) ಕಾರ್ಯಕರ್ತರ ಕಾರ್ಯ ಅನನ್ಯ. ಈ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಅವರು ಮಹತ್ವದ ‍ಪಾತ್ರ ವಹಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಮೆಚ್ಚುಗೆ ವ್ಯಕ್ತಪಡಿಸಿದೆ.

ಮನೆಮನೆಗೆ ತೆರಳಿ ಸಮೀಕ್ಷೆ, ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಕಾರ್ಮಿಕರ ಆರೋಗ್ಯ ತಪಾಸಣೆ ಸೇರಿದಂತೆ ಸಮುದಾಯದಲ್ಲಿ ಸೋಂಕಿನ ಲಕ್ಷಣಗಳು ಇವೆಯೇ ಎಂಬುದನ್ನು ಪರಿಶೀಲಿಸುವಲ್ಲಿ ಅವರು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಶ್ಲಾಘಿಸಿದೆ.

‘42,000 ಕಾರ್ಯಕರ್ತೆಯರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. 1.59 ಕೋಟಿ ಮನೆಗಳಿಗೆ ಭೇಟಿ ನೀಡಿರುವ ಅವರು, ವಯೋವೃದ್ಧರು, ಮಧುಮೇಹ, ರಕ್ತದೊತ್ತಡ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಹಾಗೂ ಕೊರೊನಾ ಸೋಂಕಿಗೆ ತುತ್ತಾಗುವ ಅಪಾಯದಲ್ಲಿರುವವರ ಸಮೀಕ್ಷೆ ನಡೆಸಿದ್ದಾರೆ’ ಎಂದು ಸಚಿವಾಲಯ ಹೇಳಿದೆ.

ADVERTISEMENT

‘ಸಮೀಕ್ಷೆಗೆ ಒಳಪಟ್ಟವರ ಆರೋಗ್ಯದ ಮೇಲೆ ಸತತ ನಿಗಾ ಇಟ್ಟಿರುವ ಕಾರ್ಯಕರ್ತೆಯರು, ನಿಯಮಿತವಾಗಿ ಅವರ ಮನೆಗಳಿಗೆ ತೆರಳಿ, ಪರಿಶೀಲನಾ ಕಾರ್ಯವನ್ನೂ ಕೈಗೊಳ್ಳುತ್ತಿದ್ದಾರೆ. ಐಎಲ್‌ಐ, ಸಾರಿ ಲಕ್ಷಣಗಳುಳ್ಳ ಜನರು ಇರುವ ಮನೆಗಳಿಗೂ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ. ಅವರಿಗೆ ಸಲಹೆ–ಸೂಚನೆ ನೀಡಿ ಧೈರ್ಯ ತುಂಬಿದ್ದಾರೆ’ ಎಂದೂ ಸಚಿವಾಲಯ ಮೆಚ್ಚುಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.