ಜ್ಯೋತಿರಾದಿತ್ಯ ಸಿಂಧಿಯಾ
ಚಿತ್ರ: ಎಕ್ಸ್
ನವದೆಹಲಿ: ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸುಕಾಂತ ಮಜುಂದಾರ್ ಅವರು ಶನಿವಾರ ನವದೆಹಲಿಯಲ್ಲಿ ನಡೆದ ಅಷ್ಟಲಕ್ಷ್ಮಿ ಮಹೋತ್ಸವದ ಫ್ಯಾಷನ್ ಶೋನಲ್ಲಿ ರ್ಯಾಂಪ್ ವಾಕ್ ಮಾಡುವ ಮೂಲಕ ನೆರೆದಿದ್ದವರನ್ನು ಅಚ್ಚರಿಗೊಳಿಸಿದರು.
ಅಷ್ಟಲಕ್ಷ್ಮಿ ಮಹೋತ್ಸವವು ಈಶಾನ್ಯ ರಾಜ್ಯಗಳ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಆಚರಿಸಲು ಮೀಸಲಾಗಿರುವ ಹಬ್ಬವಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಫ್ಯಾಷನ್ ಶೋ ಪ್ರಮುಖ ಆಕರ್ಷಣೆಯಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದ್ದರು.
ಜಾಕೆಟ್ ಧರಿಸಿ ರ್ಯಾಂಪ್ ವಾಕ್ ಮಾಡಿರುವ ಚಿತ್ರಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಜ್ಯೋತಿರಾದಿತ್ಯ ಸಿಂಧಿಯಾ, ‘ಈಶಾನ್ಯ ಭಾರತದ ಸಾಂಪ್ರಾದಾಯಿಕ ಉಡುಗೆಗಳನ್ನು ಪ್ರದರ್ಶಿಸುವ ಫ್ಯಾಶನ್ ಶೋನಲ್ಲಿ ನಾನು ಭಾಗಿಯಾಗಿದ್ದೇನೆ. ಪ್ರತಿ ರಾಜ್ಯವು ಪ್ರತಿಭಾವಂತ ಕಲಾವಿದರು ಮತ್ತು ರೂಪದರ್ಶಿಗಳಿಂದ ಸುಂದರವಾಗಿ ಪ್ರತಿನಿಧಿಸಲ್ಪಟ್ಟಿದೆ’ ಎಂದರು.
ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ ಮತ್ತು ಸಿಕ್ಕಿಂ ಅನ್ನು ಸಾಮಾನ್ಯವಾಗಿ 'ಅಷ್ಟಲಕ್ಷ್ಮಿ' ಎಂದು ಕರೆಯಲಾಗುತ್ತದೆ. ಈ ರಾಜ್ಯಗಳ ಸಂಸ್ಕೃತಿ, ವೈಶಿಷ್ಟ್ಯತೆ, ಪ್ರಾದೇಶಿಕ ಮಹತ್ವವನ್ನು ಗುರುತಿಸಲು ಅಷ್ಟಲಕ್ಷ್ಮಿ ಮಹೋತ್ಸವ ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.