ವಿಶ್ವಸಂಸ್ಥೆ: ‘ಕೋವಿಡ್–19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲೂ ಸಹಾಯಹಸ್ತ ಚಾಚಲು ವಿಶ್ವಸಂಸ್ಥೆ ಸಿದ್ಧವಿದೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರ ಉಪವಕ್ತಾರ ಫರ್ಹಾನ್ ಹಕ್ ಹೇಳಿದ್ದಾರೆ.
‘ಭಾರತದ ವಿವಿಧ ಹಂತದ ಅಧಿಕಾರಿಗಳೊಂದಿಗೆ ನಾವು ಸತತ ಸಂಪರ್ಕದಲ್ಲಿದ್ದೇವೆ. ನ್ಯೂಯಾರ್ಕ್ ಹಾಗೂ ಭಾರತದಲ್ಲಿರುವ ಸಂಬಂಧಪಟ್ಟ ಪ್ರತಿನಿಧಿಗಳೊಂದಿಗೂ ಮಾತುಕತೆ ನಡೆಸಿದ್ದೇವೆ’ ಎಂದು ಅವರು ಹೇಳಿದ್ದಾರೆ.
‘ನಿರ್ದಿಷ್ಟವಾದ ನೆರವಿಗಾಗಿ ಭಾರತದಿಂದ ಈ ವರೆಗೆ ಬೇಡಿಕೆ ಬಂದಿಲ್ಲ. ಯಾವುದೇ ಪರಿಹಾರ/ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ನಾವು ಭಾರತಕ್ಕೆ ಕಳುಹಿಸಿಲ್ಲ. ಆದರೆ, ಬೇಡಿಕೆ ಬಂದರೆ ತಕ್ಷಣ ಸ್ಪಂದಿಸಲು ಸಿದ್ಧ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಹಿರಿಯ ಅಧಿಕಾರಿ ಮಾರಿಯಾ ಲೂಯಿಜಾ ರಿಬೈರೊ ವಿವೋಟ್ಟಿ ಅವರು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿ ಅವರೊಂದಿಗೂ ಮಾತುಕತೆ ನಡೆಸಿ, ಭಾರತದಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ’ ಎಂದು ಹಕ್ ತಿಳಿಸಿದ್ದಾರೆ.
‘ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಸಿಬ್ಬಂದಿಯ ಆರೋಗ್ಯ ಕಾಪಾಡುವ ಜವಾಬ್ದಾರಿಯನ್ನು ನಾವೇ ತೆಗೆದುಕೊಂಡಿದ್ದೇವೆ. ಈಗಾಗಲೇ ಕೋವಿಡ್ ಪಿಡುಗಿನಿಂದ ತತ್ತರಿಸಿರುವ ಭಾರತದ ಆರೋಗ್ಯ ಕ್ಷೇತ್ರದ ಮೇಲೆ ಮತ್ತಷ್ಟು ಒತ್ತಡ ಹೇರಬಾರದು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.