ನವದೆಹಲಿ: 59 ಮಂದಿ ಸಾವಿಗೆ ಕಾರಣವಾಗಿದ್ದ 1997ರ ದೆಹಲಿಯ ಉಪಹಾರ್ ಚಿತ್ರಮಂದಿರದ ಅಗ್ನಿ ಅವಘಡ ಪ್ರಕರಣದಲ್ಲಿ ಸಾಕ್ಷಿಗಳನ್ನು ತಿರುಚಿದ ಆರೋಪದಡಿ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಸಹೋದರರಿಗೆ ದೆಹಲಿಯ ಪಟಿಯಾಲ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸಾಕ್ಷಿ ತಿರುಚಿದ ಆರೋಪದಡಿ ಇಬ್ಬರೂ ದೋಷಿಗಳೆಂದು ಸಾಬೀತಾಗಿದೆ ಎಂದು ಕೋರ್ಟ್ ಕಳೆದ ತಿಂಗಳು ಹೇಳಿತ್ತು.
ಬೃಹತ್ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಅನ್ಸಾಲ್ ಸಹೋದರರಿಗೆ ₹ 2.25 ಕೋಟಿ ದಂಡವನ್ನೂ ವಿಧಿಸಲಾಗಿದೆ.
ಜುಲೈ 13, 1997ರಂದು ಹಿಂದಿಯ ‘ಬಾರ್ಡರ್’ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಅವಘಡದಲ್ಲಿ 59 ಮಂದಿ ಜೀವ ಕಳೆದುಕೊಂಡಿದ್ದರು.
ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಸ್ವರೂಪ್ ಪನ್ವಾರ್ ಮತ್ತು ಧರಮ್ವೀರ್ ಮಲ್ಹೋತ್ರಾ ವಿಚಾರಣೆ ಹಂತದಲ್ಲೇ ಸಾವಿಗೀಡಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.