ADVERTISEMENT

ಉತ್ತರ ಪ್ರದೇಶ: ವಿಧಾನಸಭೆ ಚುನಾವಣೆ ಗೆಲ್ಲಲು ದೇವಸ್ಥಾನಗಳಿಗೆ ಮೊರೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 11:14 IST
Last Updated 25 ಜುಲೈ 2021, 11:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಲಖನೌ: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕಾರಣಿಗಳು ಈಗ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ವಿಧಾನಸಭೆ ಚುನಾವಣೆ ನಡೆಯಲು ಇನ್ನೂ ಏಳು ತಿಂಗಳು ಉಳಿದಿವೆ. ಚುನಾವಣೆಗೆ ಸಿದ್ಧತೆ ಕೈಗೊಳ್ಳುತ್ತಿರುವ ಬಿಜೆಪಿ, ಬಿಎಸ್‌ಪಿ, ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ ಮುಖಂಡರು ಈಗಿನಿಂದಲೇ ದೇವಸ್ಥಾನಗಳಿಗೆ ಮತ್ತು ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಕೋರುತ್ತಿದ್ದಾರೆ.

ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಎಸ್‌.ಸಿ. ಮಿಶ್ರಾ ಸೇರಿದಂತೆ ಪಕ್ಷದ ಹಲವು ನಾಯಕರು ಶುಕ್ರವಾರ ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರ ಮತ್ತು ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿದ್ದರು. ಮಿಶ್ರಾ ಅವರು ಪ್ರಮುಖ ಸ್ವಾಮೀಜಿಗಳ ಆಶ್ರಮಗಳಿಗೂ ಭೇಟಿ ನೀಡಿದ್ದರು.

ADVERTISEMENT

ಶನಿವಾರ ಬಿಜೆಪಿ ಶಾಸಕರು, ನಾಯಕರು, ಪದಾಧಿಕಾರಿಗಳು ಇದೇ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ರಾಜ್ಯದಾದ್ಯಂತ ಸ್ವಾಮೀಜಿಗಳನ್ನು ಸನ್ಮಾನಿಸಿದ ಪಕ್ಷದ ಮುಖಂಡರು, ಆಶ್ರಮಗಳು, ದೇವಾಲಯಗಳಿಗೆ ಭೇಟಿ ನೀಡಿದ್ದರು. ಜತೆಗೆ, ವಿಶೇಷ ಪೂಜೆಗಳನ್ನು ಸಹ ಹಮ್ಮಿಕೊಂಡಿದ್ದರು.

ವಾರಾಣಸಿಯ ಪ್ರಸಿದ್ಧ ’ಬಾತುಕ್‌ ಭೈರವ್‌’ ದೇವಸ್ಥಾನದಲ್ಲಿ ಬಿಜೆಪಿ ನಾಯಕರು ‘ತಾಂತ್ರಿಕ್‌’ ಪೂಜೆಯನ್ನು ಹಮ್ಮಿಕೊಂಡಿದ್ದರು ಎಂದು ವರದಿಯಾಗಿದೆ. ‘ಬಾತುಕ್‌ ಭೈರವ್‌’ ದೇವಸ್ಥಾನದಲ್ಲಿ ದೇವರಿಗೆ ಮದ್ಯವನ್ನು ಅರ್ಪಿಸಲಾಗುತ್ತಿದೆ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಮತ್ತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಹ ವಾರಾಣಸಿಗೆ ಶೀಘ್ರ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಆ ಪಕ್ಷಗಳ ಮುಖಂಡರು ತಿಳಿಸಿದ್ದಾರೆ.

’ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕುವುದು ಸಾಮಾನ್ಯ. ತಾವು ದೇವರಿಗೆ ಹೆದರುತ್ತೇವೆ ಎನ್ನುವ ಸಂದೇಶ ರವಾನಿಸುವ ಪ್ರಯತ್ನವನ್ನು ರಾಜಕಾರಣಿಗಳು ಮಾಡುತ್ತಾರೆ’ ಎಂದು ಲಖನೌದ ರಾಜಕೀಯ ವಿಶ್ಲೇಷಕ ಜೆ.ಪಿ. ಶುಕ್ಲಾ ಅಭಿಪ್ರಾಯಪಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.