ಕೊಚ್ಚಿ(ಪಿಟಿಐ):ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕಳುಹಿಸಿರುವ ಷೋಕಾಸ್ ನೋಟಿಸ್ಗಳಿಗೆ ಉತ್ತರಿಸಲು ಕುಲಪತಿಗಳಿಗೆ (ವಿ.ಸಿಗಳು) ನೀಡಿದ ಸಮಯವನ್ನು ಕೇರಳ ಹೈಕೋರ್ಟ್ ಗುರುವಾರ ನ.7ರವರೆಗೆ ವಿಸ್ತರಿಸಿದೆ. ಷೋಕಾಸ್ನೋಟಿಸ್ಗೆ ತಡೆಯಾಜ್ಞೆ ನೀಡಲು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನಿರಾಕರಿಸಿದರು.
ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅವರ ನೇಮಕಾತಿಗಳು ಕಾನೂನುಬಾಹಿರ ಆಗಿರುವುದರಿಂದ, ತಮ್ಮ ಹುದ್ದೆಗಳಲ್ಲಿ ಮುಂದುವರಿಯಲು ಅವರಿಗೆ ಏಕೆ ಅವಕಾಶ ನೀಡಬೇಕು ಎಂದು ಕುಲಪತಿಗಳಿಂದ ವಿವರಣೆ ಕೇಳಲಾಗಿದೆ.
ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಮತ್ತು ವೈಯಕ್ತಿಕ ವಿಚಾರಣೆಗೆ ಹಾಜರಾಗಲು ಸಮಯ ನೀಡಿದ್ದಾರೆ ಎಂದು ರಾಜ್ಯಪಾಲರ ಪರ ಹಾಜರಾದ ಹಿರಿಯ ವಕೀಲ ಜಾಜು ಬಾಬು ಹೇಳಿದರು.
ರಾಜ್ಯಪಾಲರ ನೋಟಿಸ್ ಕಾನೂನುಬಾಹಿರ ಮತ್ತು ಅನೂರ್ಜಿತ ಎಂದು ಆರೋಪಿಸಿರುವ ಕುಲಪತಿಗಳ ಅರ್ಜಿಯನ್ನು ನ. 8 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ನ್ಯಾಯಾಲಯವು ಪಟ್ಟಿ ಮಾಡಿದೆ. ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಖಾನ್ ಅವರು ರಾಜ್ಯದ 11 ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದರು.
ಆರೋಪ ನಿರಾಕರಣೆ: ಕುಲಪತಿಗಳ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂಬ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆರೋಪವನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತಳ್ಳಿ ಹಾಕಿದರು.
ನೇಮಕಾತಿಯಲ್ಲಿ ತಮ್ಮ ಹಸ್ತಕ್ಷೇಪದ ಒಂದು ಉದಾಹರಣೆ ತೋರಿಸಿದರೆ ರಾಜೀನಾಮೆ ನೀಡಲಾಗುವುದು. ರಾಜ್ಯದಲ್ಲಿ ಕಳ್ಳಸಾಗಾಣಿಕೆ ಚಟುವಟಿಕೆಗಳಿಗೆ ಮುಖ್ಯಮಂತ್ರಿಗಳ ಕಚೇರಿ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದರು.
‘ಮುಖ್ಯಮಂತ್ರಿ ಕಚೇರಿಯಲ್ಲಿ ಕುಳಿತವರು ಕಣ್ಣೂರು ವಿಶ್ವವಿದ್ಯಾಲಯದ ಕುಲಪತಿಗೆ ತಮ್ಮ ಸಂಬಂಧಿಕರನ್ನು ನೇಮಿಸಲು ಆದೇಶಿಸುತ್ತಾರೆ. ಆದರೆ ಆ ಸ್ಥಾನಕ್ಕೆ ಅವರು ಅನರ್ಹರು.ನಾನು ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಆದರೆ, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಕಚೇರಿ ಮತ್ತು ಸಿ.ಎಂ ಆಪ್ತರು ಕಳ್ಳಸಾಗಾಣಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ, ಖಂಡಿತ ನಾನು ಮಧ್ಯಪ್ರವೇಶಿಸಲು ಕಾರಣಗಳಿವೆ’ ಎಂದು ಹೇಳಿದರು.
ತಮ್ಮ ವಿರುದ್ಧದ ಆರೋಪ ಸಾಬೀತುಪಡಿಸಲು ಅಥವಾ ಸಮರ್ಥಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಲು ಸಾಧ್ಯವೇ ಎಂದು ಖಾನ್ ಮುಖ್ಯಮಂತ್ರಿಗೆ ಬಹಿರಂಗವಾಗಿ ಸವಾಲು ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.