ಲಖನೌ: ಮನುಷ್ಯರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು ಅವರ ಬಿಡುಗಡೆಗೆ ಇಂತಿಷ್ಟು ಮೊತ್ತದ ಬೇಡಿಕೆ ಇಡುವುದನ್ನು ನಾವೆಲ್ಲಾ ಕೇಳಿರುತ್ತೇವೆ. ಆದರೆ ಉತ್ತರ ಪ್ರದೇಶದಲ್ಲಿ ಮೊಸಳೆಯೊಂದನ್ನು ಒತ್ತೆಯಾಳಾಗಿ ಇಟ್ಟುಕೊಂಡು ಅದರ ಬಿಡುಗಡೆಗೆ ₹50 ಸಾವಿರದ ಬೇಡಿಕೆ ಇಟ್ಟಿದ್ದಾರೆ!
ಹೌದು. ಇಲ್ಲಿನ ಲಖೀಂಪುರ್ ಖೇರಿ ಜಿಲ್ಲೆಯ ಮಿದಾನಿಯಾ ಗ್ರಾಮದಲ್ಲಿ ಈ ಪ್ರಸಂಗ ನಡೆದಿದೆ.
ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬಂದಿದ್ದ ಮೊಸಳೆಯೊಂದು ಕೆಲ ದಿನಗಳ ಹಿಂದೆ ಗ್ರಾಮದ ಹತ್ತಿರವಿರುವ ಕೊಳದೊಳಗೆ ಸೇರಿಕೊಂಡಿತ್ತು. ಅದನ್ನು ಕಂಡು ಭಯಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ತಕ್ಷಣವೇ ಮೊಸಳೆಯನ್ನು ಹಿಡಿದೊಯ್ಯುವಂತೆ ಮನವಿ ಮಾಡಿದ್ದರು.
ಪದೇ ಪದೇ ಮನವಿ ಮಾಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಕೊನೆಗೆ ಸ್ಥಳಿಯರೇ ಮೊಸಳೆಯನ್ನು ಹಿಡಿದಿದ್ದರು. ನಂತರ ಗ್ರಾಮಕ್ಕೆ ಹೋದ ಅಧಿಕಾರಿಗಳು ಅದನ್ನು ಹಸ್ತಾಂತರಿಸುವಂತೆ ಕೇಳಿದರೂಸ್ಥಳೀಯರು ಅದಕ್ಕೆ ಒಪ್ಪಲಿಲ್ಲ.
‘ಜೀವವನ್ನೇ ಪಣಕ್ಕಿಟ್ಟು ಮೊಸಳೆ ಹಿಡಿದಿದ್ದೇವೆ. ಅದನ್ನು ಹಾಗೆಯೇ ಬಿಡಲು ಸಾಧ್ಯವಿಲ್ಲ. ₹50 ಸಾವಿರ ಕೊಟ್ಟರಷ್ಟೇ ನಿಮ್ಮ ಸುಪರ್ದಿಗೆ ನೀಡುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದರು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಹಣ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ದಯಮಾಡಿ ಹಟ ಹಿಡಿಯಬೇಡಿ ಎಂದು ಮನವೊಲಿಸಲು ಮುಂದಾದರೂ ಅವರು ಕೇಳಲಿಲ್ಲ. ಬಿಡುವುದೇ ಇಲ್ಲ ಎಂದು ಪಟ್ಟು ಹಿಡಿದು ಕುಳಿತರು. ಮೊಸಳೆಯನ್ನು ನಮ್ಮ ಸುಪರ್ದಿಗೆ ನೀಡದಿದ್ದರೆ ಪೊಲೀಸರನ್ನು ಕರೆಸಿ ಎಲ್ಲರ ಮೇಲೂ ಕಾನೂನು ಕ್ರಮಕೈಗೊಳ್ಳುವುದಾಗಿ ಬೆದರಿಸಿದ ಬಳಿಕ ಮೊಸಳೆಯನ್ನು ನೀಡಿದರು. ನಂತರ ಅದನ್ನು ನದಿಗೆ ಬಿಡಲಾಯಿತು’ ಎಂದೂ ಅವರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.