ತಿರುವನಂತಪುರ: ಸಿದ್ಧಾಂತವಾದಿ ಹಾಗೂ ಬರಹಗಾರರಾದ ಪಿ. ಗೋವಿಂದ ಪಿಳ್ಳೈ ಅವರ ಸ್ಮರಣಾರ್ಥ ಸ್ಥಾಪಿಸಿರುವ ಪಿ.ಜಿ. ರಾಷ್ಟ್ರೀಯ ಪ್ರಶಸ್ತಿಗೆ ಗಾಯಕ ಟಿ.ಎಂ. ಕೃಷ್ಣ ಆಯ್ಕೆಯಾಗಿದ್ದಾರೆ.
₹3 ಲಕ್ಷ ನಗದು, ಪ್ರಶಸ್ತಿ ಪತ್ರ ಮತ್ತು ಮೂರ್ತಿಯನ್ನು ಹೊಂದಿರುವ ಈ ಪ್ರಶಸ್ತಿಯನ್ನು ಪಿ.ಜಿ. ಸಂಸ್ಕೃತಿ ಕೇಂದ್ರವು ಪ್ರದಾನ ಮಾಡಲಿದೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಸಂಗೀತಗಾರ ಶ್ರೀವಲ್ಸನ್ ಜೆ. ಮೆನನ್, ನರ್ತಕಿ ರಾಜಶ್ರೀ ವಾರಿಯರ್, ಪಿ.ಜಿ. ಸಂಸ್ಕೃತಿ ಕೇಂದ್ರದ ಕಾರ್ಯದರ್ಶಿ ಆರ್. ಪಾರ್ವತಿ ದೇವಿ ಅವರನ್ನೊಳಗೊಂಡ ಸಮಿತಿಯು ಐದನೇ ವರ್ಷದ ಪ್ರಶಸ್ತಿಗೆ ಟಿ.ಎಂ. ಕೃಷ್ಣ ಅವರನ್ನು ಆಯ್ಕೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
ತಿರುವನಂತಪುರದ ಎಕೆಜಿ ಆಡಿಟೋರಿಯಂನಲ್ಲಿ ನ.22ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್, ಪತ್ರಕರ್ತ ಎನ್.ರಾಮ್, ಸಾಹಿತಿ ಆರುಂಧತಿ ರಾಯ್, ಇತಿಹಾಸಕಾರರಾದ ರೊಮಿಲಾ ಥಾಪರ್ ಈ ಹಿಂದಿನ ವರ್ಷಗಳಲ್ಲಿ ಪ್ರಶಸ್ತಿಗೆ ಭಾಜನರಾದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.