ADVERTISEMENT

ನಕ್ಸಲರೊಂದಿಗೆ ಕಾದಾಟ: 17 ಯೋಧರ ಸಾವು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 19:45 IST
Last Updated 22 ಮಾರ್ಚ್ 2020, 19:45 IST
ಫೈಲ್ ಚಿತ್ರ
ಫೈಲ್ ಚಿತ್ರ   

ರಾಯಪುರ (ಪಿಟಿಐ): ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ಮೇಲೆ ನಡೆಸಿದ ಎನ್‌ಕೌಂಟರ್ ವೇಳೆ ಕಾಣೆಯಾಗಿದ್ದ ಭದ್ರತಾ ಪಡೆಯ 17 ಸಿಬ್ಬಂದಿಯ ಮೃತದೇಹಗಳು ಭಾನುವಾರ ಪತ್ತೆಯಾಗಿವೆ.

ಕಾಡಿನಲ್ಲಿದ್ದ ಮೃತದೇಹಗಳನ್ನು ತನಿಖಾ ತಂಡ ಗುರುತಿಸಿ ಹೊರತಂದಿದೆ ಎಂದು ಛತ್ತೀಸಗಡದ ಬಸ್ತಾರ್‌ ವಲಯದ ಪೊಲೀಸ್ ಮಹಾನಿರ್ದೇಶಕ ಸುಂದರ್‌ರಾಜ್ ಪಿ. ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಜಿಲ್ಲಾ ಮೀಸಲು ರಕ್ಷಣಾ ಪಡೆ, ವಿಶೇಷ ಕಾರ್ಯಪಡೆ, ಕಮಾಂಡೊ ಪಡೆ (ಕೋಬ್ರಾ) ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ಸೇರಿದಂತೆ ಒಟ್ಟು 600 ಭದ್ರತಾ ಸಿಬ್ಬಂದಿ ನಕ್ಸಲರ ವಿರುದ್ಧ ಎಲ್ಮಗುಂಡದಲ್ಲಿ ಮೂರು ಕಡೆಯಿಂದ ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಚರಣೆಯಲ್ಲಿ ಕೆಲವು ಸಿಬ್ಬಂದಿ ಗಾಯಗೊಂಡಿದ್ದು, 17 ಮಂದಿ ನಾಪತ್ತೆಯಾಗಿದ್ದರು.

ADVERTISEMENT

‘ಇಲ್ಲಿನ ಮಿನ್ಪಾ ಗ್ರಾಮದ ಕಾಡಿನ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿಯ ಮೇಲೆ ಶಸ್ತ್ರಸಜ್ಜಿತ ಸುಮಾರು 250 ನಕ್ಸಲರು ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಭದ್ರತಾ ಪಡೆಗಳ 15 ಸಿಬ್ಬಂದಿ ಗಾಯಗೊಂಡಿದ್ದರು.ಸುಮಾರು ಎರಡೂವರೆ ಗಂಟೆ ಈ ಸಂಘರ್ಷ ನಡೆದಿತ್ತು’ ಎಂದು ಸುಂದರ್‌ರಾಜ್‌ ಮಾಹಿತಿ ನೀಡಿದ್ದಾರೆ.

‘ಗಾಯಗೊಂಡವರನ್ನು ಹೆಲಿಕಾಪ್ಟರ್‌ಗಳ ಮೂಲಕ ರಾಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿತ್ತು’ ಎಂದು ತಿಳಿಸಿದ್ದಾರೆ.ಸಂಘರ್ಷದಲ್ಲಿ, ಎಕೆ–47 ಮತ್ತು ಗ್ರೆನೇಡ್‌ ಲಾಂಚರ್‌ ಸೇರಿದಂತೆ 16 ಸ್ವಯಂಚಾಲಿತ ಆಯುಧಗಳೂ ಕಾಣೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.