ADVERTISEMENT

ದೆಹಲಿಗೆ ಹೋಗುವ ಮಾರ್ಗ ಉತ್ತರ ಪ್ರದೇಶದ ಮೂಲಕ ಸಾಗುತ್ತದೆ: ಅಖಿಲೇಶ್

ಮುಂಬರುವ ವಿಧಾನಸಭಾ ಚುನಾವಣೆಯಗಳು ನಿರ್ಣಾಯಕ– ಎಸ್‌ಪಿ ಮುಖಂಡ ಅಭಿಮತ

ಪಿಟಿಐ
Published 18 ಸೆಪ್ಟೆಂಬರ್ 2021, 15:46 IST
Last Updated 18 ಸೆಪ್ಟೆಂಬರ್ 2021, 15:46 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಲಖನೌ: ದೆಹಲಿಗೆ ಹೋಗುವ ಮಾರ್ಗವು ಉತ್ತರ ಪ್ರದೇಶದ ಮೂಲಕ ಹೋಗುತ್ತದೆ ಎಂದು ಹೇಳಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ‘ಮುಂಬರುವ ವಿಧಾನಸಭಾ ಚುನಾವಣೆಗಳು ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಹೋದರತ್ವವನ್ನು ಪುನಃಸ್ಥಾಪಿಸಲು ನಿರ್ಣಾಯಕವಾಗಲಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಿಟಿಐ ಉದ್ಯೋಗಿಗಳ ಅಖಿಲ ಭಾರತ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಂತೆ ಮಾಧ್ಯಮಗಳು ಕೂಡಾ ಯಾವುದೇ ಪಕ್ಷಪಾತವಿಲ್ಲದೇ ವಸ್ತುನಿಷ್ಠತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ದೊಡ್ಡ ಸವಾಲನ್ನು ಎದುರಿಸಬೇಕಿವೆ. ಇದರಿಂದ ಜನರಿಗೆ ಸತ್ಯ ಏನೆಂಬುದು ತಿಳಿಯಲಿದೆ. ಪತ್ರಿಕೋದ್ಯಮವು ಬಲಿಷ್ಠವಾಗಿದ್ದಾಗ ಪ್ರಜಾಪ್ರಭತ್ವವೂ ಬಲಿಷ್ಠವಾಗಿರುತ್ತದೆ’ ಎಂದು ಹೇಳಿದರು.

‘ಮಾಧ್ಯಮದಲ್ಲಿನ ಒಂದು ವಿಭಾಗವು ಉತ್ತಮವಾದ ಆದಾಯವನ್ನು ಪಡೆಯುವ ಸಲುವಾಗಿ ಕೆಲವು ಗ್ರಹಿಕೆಗಳನ್ನು ಸೃಷಿಸುತ್ತಾ, ನಿರೂಪಣೆಯ ಕೆಲಸವನ್ನು ಮಾಡುತ್ತಿದೆ’ ಎಂದು ಆರೋಪಿಸಿದ ಅವರು, ‘ಮಾಧ್ಯಮಗಳಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಮುದ್ರಣ ಮಾಧ್ಯಮವು, ಪ್ರಸ್ತುತ ಸನ್ನಿವೇಶದಲ್ಲಿ ಉತ್ತಮ ಆದಾಯದ ಕಡೆ ಗಮನ ಹರಿಸದೇ ಸತ್ಯ ಮತ್ತು ನ್ಯಾಯಯುತವಾದ ಸುದ್ದಿಯ ಪ್ರಸರಣದ ನಿರ್ವಹಣೆಗೆ ಸಂಬಂಧಿಸಿದಂತೆ ದೊಡ್ಡ ಸವಾಲನ್ನು ಎದುರಿಸುತ್ತಿದೆ’ ಎಂದರು.

ADVERTISEMENT

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ 400 ಸ್ಥಾನಗಳನ್ನು ಪಡೆಯಲಿದೆ’ ಎಂದು ಅಖಿಲೇಶ್ ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.