ತಿರುವನಂತಪುರ: ‘ಜನರ ನಂಬಿಕೆ ಮತ್ತು ವಿಶ್ವಾಸಗಳಿಗೆ ಸಂವಿಧಾನ ನೀಡಿರುವ ರಕ್ಷಣೆಯನ್ನು ಖಾತರಿಪಡಿಸಲು ಬಿಜೆಪಿ ಎಲ್ಲ ಕ್ರಮಗಳನ್ನು ಕೈಗೊಳ್ಳುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು. ಚುನಾವಣಾ ಪ್ರಚಾರಕ್ಕೆ ಶಬರಿಮಲೆಯ ಹೆಸರನ್ನು ಬಳಸದಂತೆ ಚುನಾವಣಾ ಆಯೋಗ ಸೂಚನೆ ನೀಡಿದ್ದರಿಂದ ಮೋದಿ ಅವರು ಈ ಹೆಸರನ್ನು ಉಲ್ಲೇಖಿಸದೆ ಮಾತನಾಡಿದರು.
‘ಸಿಪಿಎಂ ನೇತೃತ್ವದ ಎಡರಂಗವು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಈ ವಿಚಾರದಲ್ಲಿ ಬಾಯಿ ಮುಚ್ಚಿ ಕುಳಿತಿದೆ. ಸಂಪ್ರದಾಯವನ್ನು ಉಳಿಸಲು ಮುಂದಾದ ಭಕ್ತರ ಮೇಲೆ ಲಾಠಿ ಪ್ರಹಾರ ಮಾಡಲಾಗಿದೆ. ನಂಬಿಕೆ ಮತ್ತು ಸಂಪ್ರದಾಯಗಳನ್ನು ನಾಶಮಾಡುವ ಪ್ರಯತ್ನಗಳನ್ನು ಬಿಜೆಪಿ ವಿಫಲಗೊಳಿಸುವುದು’ ಎಂದು ಮೋದಿ ಹೇಳಿದರು.
‘ಕೆಲವು ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಕೇರಳಕ್ಕೆ ಬಂದಿದ್ದಾರೆ. ಜನರ ಸೇವೆ ಮಾಡುವುದು ಅವರ ಉದ್ದೇಶವಲ್ಲ. ಅವರು ತಮ್ಮ ರಕ್ಷಣೆ ಮಾಡಿಕೊಳ್ಳಲು ಬಂದಿದ್ದಾರೆ. ಅಂಥವರು ಮತಯಾಚನೆಗೆ ಬಂದಾಗ ‘ಈ ಕ್ಷೇತ್ರಕ್ಕಾಗಿ ನೀವೇನು ಮಾಡಿದ್ದೀರಿ’ ಎಂದು ಪ್ರಶ್ನಿಸಬೇಕು’ ಎಂದು ರಾಹುಲ್ ಗಾಂಧಿಯ ಹೆಸರು ಉಲ್ಲೇಖಿಸದೆಮೋದಿ ಜನರಲ್ಲಿ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.