ADVERTISEMENT

ಚುನಾವಣೋತ್ತರ ಹಿಂಸಾಚಾರ: ಪಶ್ಚಿಮ ಬಂಗಾಳ ರಾಜ್ಯಪಾಲರನ್ನು ಭೇಟಿಯಾದ ಕೇಂದ್ರ ತಂಡ

ಪಶ್ಚಿಮ ಬಂಗಾಳದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ವರದಿ ನೀಡುವಂತೆ ಮನವಿ

ಪಿಟಿಐ
Published 7 ಮೇ 2021, 12:45 IST
Last Updated 7 ಮೇ 2021, 12:45 IST
ಚುನಾವಣೋತ್ತರ ಹಿಂಸಾಚಾರ ಕುರಿತು ಪರಿಶೀಲಿಸಲು ಪಶ್ಚಿಮ ಬಂಗಾಳಕ್ಕೆ ತೆರಳಿರುವ ಕೇಂದ್ರ ಗೃಹಸಚಿವಾಲಯದ ನಾಲ್ವರು ಸದಸ್ಯರ ‘ಸತ್ಯ ಶೋಧನಾ ತಂಡದ ಸದಸ್ಯರು‘ ಶುಕ್ರವಾರ ರಾಜ್ಯಪಾಲ ಜಗದೀಪ್ ಧನ್‌ಖಡ್ ಅವರನ್ನು ಭೇಟಿಯಾದರು.
ಚುನಾವಣೋತ್ತರ ಹಿಂಸಾಚಾರ ಕುರಿತು ಪರಿಶೀಲಿಸಲು ಪಶ್ಚಿಮ ಬಂಗಾಳಕ್ಕೆ ತೆರಳಿರುವ ಕೇಂದ್ರ ಗೃಹಸಚಿವಾಲಯದ ನಾಲ್ವರು ಸದಸ್ಯರ ‘ಸತ್ಯ ಶೋಧನಾ ತಂಡದ ಸದಸ್ಯರು‘ ಶುಕ್ರವಾರ ರಾಜ್ಯಪಾಲ ಜಗದೀಪ್ ಧನ್‌ಖಡ್ ಅವರನ್ನು ಭೇಟಿಯಾದರು.   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ ನಡೆದ ಹಿಂಸಾಚಾರದ ಹಿಂದಿನ ಕಾರಣ ತಿಳಿಯಲು ರಚನೆಯಾಗಿರುವ ಕೇಂದ್ರ ಗೃಹ ಸಚಿವಾಲಯದ ನಾಲ್ವರು ಸದಸ್ಯರ ತಂಡ ಶುಕ್ರವಾರ ರಾಜ್ಯಪಾಲ ಜಗದೀಪ್ ಧನ್‌ಕರ್‌ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿತು.

ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ಈ ತಂಡ, ಗುರುವಾರ ಪಶ್ಚಿಮ ಬಂಗಾಳವನ್ನು ತಲುಪಿತು. ಇಲ್ಲಿನ ಸೆಕ್ರಟರಿಯೇಟ್‌ನಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಡಿಜಿಪಿ ಅವರೊಂದಿಗೆ ಸಭೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆ ಬಗ್ಗೆ, ಅದರಲ್ಲೂ ವಿಶೇಷವಾಗಿ ಮೇ 2ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಣೆಯ ನಂತರ ಭುಗಿಲೆದ್ದ ಹಿಂಸಾಚಾರ ಕುರಿತು ವರದಿ ನೀಡುವಂತೆ ಸಚಿವಾಲಯದ ತಂಡ ಧನ್‌ಕರ್‌ ಅವರಲ್ಲಿ ಮನವಿ ಮಾಡಿತು.

ಈ ತಂಡವು ಗುರುವಾರ ದಕ್ಷಿಣ 24 ಪರಗಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳ ಹಲವು ಸ್ಥಳಗಳಿಗೆ ಭೇಟಿ ನೀಡಿ ಮೃತ ವ್ಯಕ್ತಿಗಳ ಕುಟುಂಬದವರು ಮತ್ತು ಸ್ಥಳೀಯರೊಂದಿಗೆ ಚರ್ಚೆ ನಡೆಸಿತು ಎಂದು ಅವರು ಹೇಳಿದರು.

ADVERTISEMENT

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಚುನಾವಣೆ ನಂತರ ರಾಜ್ಯದ ವಿವಿಧೆಡೆ ನಡೆದಿರುವ ಹಿಂಸಾಚಾರದಲ್ಲಿ 16 ಮಂದಿ ಮೃತರಾಗಿದ್ದಾರೆ ಎಂದು ಹೇಳಿದ್ದರು.

ಟಿಎಂಸಿ ಗೂಂಡಾಗಳು ಬಿಜೆಪಿ ಕಾರ್ಯಕರ್ತರನ್ನು ಕೊಂದಿದ್ದಾರೆ, ಪಕ್ಷದ ಮಹಿಳಾ ಕಾರ್ಯಕರ್ತರ ಮೇಲೂ ದಾಳಿ ನಡೆಸಿದ್ದಾರೆ. ಕಾರ್ಯಕರ್ತರ ಮನೆಗಳನ್ನು ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದನ್ನು ಅಲ್ಲಗಳೆದಿದ್ದ ಮಮತಾ ಬ್ಯಾನರ್ಜಿ, ‘ಬಿಜೆಪಿ ಅಭ್ಯರ್ಥಿಗಳು ಹೆಚ್ಚಾಗಿ ಗೆದ್ದಿರುವ ಕ್ಷೇತ್ರಗಳಲ್ಲೇ ಹಿಂಸಾಚಾರ ನಡೆದಿದೆ‘ ಎಂದು ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.