ADVERTISEMENT

ನೆಹರೂ ಉಪನಾಮ ವಿವಾದ: ಪ್ರಧಾನಿ ಮೋದಿಗೆ ಕಾಂಗ್ರೆಸ್‌ ತಿರುಗೇಟು

ಭಾರತೀಯ ಸಂಸ್ಕೃತಿಯಲ್ಲಿ ಯಾರು ತಾಯಿಯ ಅಜ್ಜನ ಉಪನಾಮವನ್ನು ಬಳಸುತ್ತಾರೆ?

ಪಿಟಿಐ
Published 10 ಫೆಬ್ರುವರಿ 2023, 14:04 IST
Last Updated 10 ಫೆಬ್ರುವರಿ 2023, 14:04 IST
   

ನವದೆಹಲಿ : ನೆಹರೂ ಉಪನಾಮ ಬಳಸದಿರುವ ಕುರಿತಾದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್‌, ಭಾರತೀಯ ಸಂಸ್ಕೃತಿಯಲ್ಲಿ ಯಾರು ತಮ್ಮ ತಾಯಿಯ ಅಜ್ಜನ ಉಪನಾಮವನ್ನು ಬಳಸುತ್ತಾರೆ ಎಂದು ಶುಕ್ರವಾರ ಪ್ರಶ್ನಿಸಿದೆ.

ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ನೆಹರೂ ಉಪನಾಮವನ್ನು ಏಕೆ ಬಳಸುವುದಿಲ್ಲ ಎಂದು ಪ್ರಶ್ನಿಸಿದ್ದರು. ಪ್ರಧಾನಿ ಹೇಳಿಕೆ ಖಂಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಮೋದಿಯವರಿಗೆ ಭಾರತೀಯ ಸಂಸ್ಕೃತಿಯ ಕುರಿತು ಮೂಲಭೂತ ತಿಳುವಳಿಕೆ ಇಲ್ಲ ಎಂದು ಕಿಡಿಕಾರಿದ್ದಾರೆ.

‘ದೇವರು ಮಾತ್ರ ದೇಶವನ್ನು ಉಳಿಸಬಲ್ಲರು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ವ್ಯಂಗ್ಯವಾಡಿದ್ದಾರೆ.

ADVERTISEMENT

‘ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತವರಿಗೆ ಭಾರತದ ಸಂಸ್ಕೃತಿ ಗೊತ್ತಿಲ್ಲವೆ ಅಥವಾ ಅರ್ಥವಾಗುವುದಿಲ್ಲವೆ. ಹೀಗೆ ಮಾತನಾಡುತ್ತಾರೆ. ಯಾರು ತಾಯಿಯ ಅಜ್ಜನ ಉಪನಾಮವನ್ನು ಬಳಸುತ್ತಾರೆ? ಎಂದು ನೀವು ದೇಶದ ಯಾವುದೇ ವ್ಯಕ್ತಿಯನ್ನು ಕೇಳಿ’ ಎಂದು ಅವರು ತಿರುಗೇಟು ನೀಡಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸುರ್ಜೇವಾಲಾ ಮಾತನಾಡಿದರು.

‘ಭಾರತದ ಸಂಸ್ಕೃತಿಯ ಬಗ್ಗೆ ಅವರಿಗೆ ಈ ಮೂಲಭೂತ ತಿಳುವಳಿಕೆಯೂ ಇಲ್ಲದಿದ್ದರೆ, ದೇವರು ಮಾತ್ರ ಈ ದೇಶವನ್ನು ಉಳಿಸಬಲ್ಲನು’ ಎಂದು ಸುರ್ಜೇವಾಲಾ ಹೇಳಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಸಭೆಯಲ್ಲಿ ಉತ್ತರಿಸುವ ವೇಳೆ, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ನೆಹರೂ ಉಪನಾಮವನ್ನು ಏಕೆ ಬಳಸುವುದಿಲ್ಲ ಎಂದು ಪ್ರಶ್ನಿಸಿದ್ದರು. 356ನೇ ವಿಧಿಯನ್ನು ಕಾಂಗ್ರೆಸ್ ಹಲವಾರು ಬಾರಿ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ್ದರು.

‘ಈ ದೇಶದಲ್ಲಿ 600 ಯೋಜನೆಗಳು ಗಾಂಧಿ-ನೆಹರೂ ಕುಟುಂಬದ ಹೆಸರಿನಲ್ಲಿವೆ ಎಂದು ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ಆದರೆ, ಒಬ್ಬ ವ್ಯಕ್ತಿ ಸಹ ನೆಹರೂ ಉಪನಾಮವನ್ನು ಏಕೆ ಇಡುವುದಿಲ್ಲ ಎಂದು ನನಗೆ ತುಂಬಾ ಆಶ್ಚರ್ಯವಾಗಿದೆ. ನೆಹರೂ ಅಂತಹ ಖ್ಯಾತ ವ್ಯಕ್ತಿಯಾಗಿದ್ದರೆ ಅವರ ಉಪನಾಮ ಬಳಸುವುದರಿಂದ ಅಪಮಾನವೇನು?’ಎಂದು ಮೋದಿ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.