ಚೆನ್ನೈ:ಪ್ರಧಾನಿ ನರೇಂದ್ರ ಮೋದಿ ಅವರು‘ನಮೋ’ ಆ್ಯಪ್ ಮೂಲಕ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವ ವೇಳೆ, ಪಕ್ಷದ ಕಾರ್ಯಕರ್ತರೊಬ್ಬರು ಕೇಂದ್ರ ಸರ್ಕಾರದ ನೀತಿಯನ್ನು ಟೀಕಿಸಿದ್ದಾರೆ. ಇದರಿಂದ ಮೋದಿ ಮುಜುಗರ ಎದುರಿಸಿದ್ದಾರೆ.
ಉತ್ತರ ತಮಿಳುನಾಡಿನ ಕೆಲವು ಜಿಲ್ಲೆಗಳು ಮತ್ತು ಪುದುಚೇರಿಯ ಬಿಜೆಪಿ ಕಾರ್ಯಕರ್ತರೊಂದಿಗೆ ಮೋದಿ ಅವರು ಬುಧವಾರ ಸಂಜೆ ಸಂವಾದ ನಡೆಸುತ್ತಿದ್ದರು. ಆಗ ವಿಳ್ಳುಪುರಂ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ನಿರ್ಮಲ್ ಕುಮಾರ್ ಜೈನ್ ಎಂಬುವವರು ಪ್ರಶ್ನೆ ಕೇಳಲು ಎದ್ದುನಿಂತರು. ನಿರ್ಮಲ್ ಅವರನ್ನು ಮೋದಿ ನಗುತ್ತಲೇ ಉತ್ತೇಜಿಸಿದರು.
‘ಆದಾಯ ತೆರಿಗೆಯಲ್ಲಿ, ಸಾಲ ನೀಡಿಕೆ ಪ್ರಕ್ರಿಯೆಗಳಲ್ಲಿ ತಮಗೆ ವಿನಾಯಿತಿ ಏಕೆ ನೀಡುತ್ತಿಲ್ಲ ಎಂಬುದು ಮಧ್ಯಮವರ್ಗದ ಜನರಿಗೆ ಅರ್ಥವಾಗುತ್ತಿಲ್ಲ. ಈ ವರ್ಗದ ಜನರಿಂದ ತೆರಿಗೆ ವಸೂಲಿ ಮಾಡಲು ಮಾತ್ರ ಸರ್ಕಾರ ಕಾಳಜಿ ವಹಿಸುತ್ತದೆ. ಇತರ ವಿಷಯಗಳಲ್ಲೂ ಈ ವರ್ಗದ ಬಗ್ಗೆ ಅಷ್ಟೇ ಕಾಳಜಿ ವಹಿಸಿ’ ಎಂದು ನಿರ್ಮಲ್ ಅವರು ಮೋದಿಗೆ ಹೇಳಿದರು.
ಈ ಮಾತಿನಿಂದ ಮೋದಿ ಸ್ವಲ್ಪ ಗಂಭೀರವಾದರು. ನಿರ್ಮಲ್ ಅವರ ಪ್ರತಿಪಾದನೆಯನ್ನು ಅಲ್ಲಗಳೆದರು. ‘ಧನ್ಯವಾದಗಳು ನಿರ್ಮಲ್ ಜೀ. ನೀವೊಬ್ಬ ವ್ಯಾಪಾರಿ. ಹೀಗಾಗಿ ಸದಾ ವ್ಯಾಪಾರ–ವಹಿವಾಟಿನ ಬಗ್ಗೆಯೇ ಮಾತನಾಡುತ್ತೀರಿ. ಶ್ರೀಸಾಮಾನ್ಯನ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ ಎಂದು ಭರವಸೆ ನೀಡುತ್ತೇನೆ’ ಎಂದರು.
ಆದರೆ ವಿಳ್ಳುಪುರಂ ಕಾರ್ಯಕರ್ತರೊಂದಿಗೆ ನಡೆಸುತ್ತಿದ್ದ ಸಂವಾದವನ್ನು ಮೋದಿ ತಕ್ಷಣವೇ ಮೊಟಕುಗೊಳಿಸಿ, ಪುದುಚೇರಿಯ ಕಾರ್ಯಕರ್ತರನ್ನು ಸಂವಾದಕ್ಕೆ ಆಹ್ವಾನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.