ರಾಂಚಿ: ವಾಮಾಚಾರ ಮಾಡುತ್ತಿದ್ದರೆಂಬ ಕಾರಣಕ್ಕೆ ಸಂಬಂಧಿಯೇ ಮಹಿಳೆಯನ್ನು ಕಬ್ಬಿಣದ ಸರಳಿನಿಂದ ಹೊಡೆದು ಕೊಂದಿರುವ ಘಟನೆ ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ಸೀಮಾ ದೇವಿ (31) ಎಂದು ಗುರುತಿಸಲಾಗಿದೆ. ಕೊಲೆ ಆರೋಪ ಸಂಬಂಧ ಬಸೋ ದೇವಿ ಅಲಿಯಾಸ್ ಬಸಂತಿ ದೇವಿ (35) ಎಂಬವರನ್ನು ಬಂಧಿಸಿ, ಹತ್ಯೆಗೆ ಬಳಲಾದ ಕಬ್ಬಿಣದ ಸರಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಬಂಧ 9 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ರಾಂಚಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ನೌಶದ್ ಅಲಾಂ ಪ್ರತಿಕ್ರಿಯಿಸಿದ್ದು, ‘ಸೀಮಾ ಅವರು ಮನೆಯಲ್ಲಿ ಪಾತ್ರೆ ತೊಳಿಯುತ್ತಿದ್ದ ವೇಳೆ ಬಸೋ ದೇವಿ ಬಂದು ಕಬ್ಬಿಣದ ಸರಳಿನಿಂದ ಹೊಡೆದಿದ್ದಾರೆ. ಸೀಮಾ ಮಾಟಮಂತ್ರ ಅಭ್ಯಾಸ ಮಾಡಿದ್ದು, ಇದರಿಂದ ಗ್ರಾಮದಲ್ಲಿ ಕೆಲವರು ಮೃತಪಟ್ಟಿದ್ದಾರೆ ಎಂದು ಬಸು ಆರೋಪಿಸಿದ್ದಾರೆ. ಆದಾಗ್ಯೂ ಆಸ್ತಿ ವಿವಾದ ಸಂಬಂಧ ಕೊಲೆ ನಡೆದಿರುವ ಶಂಕೆ ಇದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.