ADVERTISEMENT

ಗಂಡನ ಕೊಂದು ಮನೆಯಲ್ಲೇ ಹೂತುಹಾಕಿದ ಮಹಿಳೆ

ಪಿಟಿಐ
Published 22 ನವೆಂಬರ್ 2019, 19:46 IST
Last Updated 22 ನವೆಂಬರ್ 2019, 19:46 IST
.
.   

ಅನುಪ್ಪುರ್‌ (ಮಧ್ಯಪ್ರದೇಶ): ವಕೀಲ ಗಂಡನನ್ನು ಕೊಂದು ಮನೆಯಲ್ಲೇ ಹೂತುಹಾಕಿದ ಘಟನೆ ತಿಂಗಳಾದ ನಂತರ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೆ ತಾನು ಮಾಡಿದ ಅಪರಾಧ ಕೃತ್ಯಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಗದಂತೆ ಮಾಡಲು ಗಂಡನನ್ನು ಹೂತ ಜಾಗದಲ್ಲೇ ಮಹಿಳೆ ಅಡುಗೆ ಮನೆ ಮಾಡಿಕೊಂಡಿದ್ದಳು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದ ಕೊಟ್ಮಾ ಎಂಬಲ್ಲಿನ ನಿವಾಸಿ ಪ್ರತಿಮಾ ಬನವಾಲ್‌ ಈ ಕೃತ್ಯ ಎಸಗಿದ ಆರೋಪಿ. ಪೊಲೀಸರ ದಾರಿ ತಪ್ಪಿಸಲು ಗಂಡಮೋಹಿತ್ ಕಣ್ಮರೆಯಾಗಿದ್ದಾನೆ ಎಂಬ ದೂರನ್ನೂ ಪ್ರತಿಮಾ ನೀಡಿದ್ದಳು ಎಂದು ಉಪವಿಭಾಗೀಯ ಪೊಲೀಸ್‌ ಅಧಿಕಾರಿ ಕೆ.ಎನ್‌.ಪ್ರಸಾದ್ ಹೇಳಿದ್ದಾರೆ.

ಮೋಹಿತ್‌ ಕಣ್ಮರೆಯಾಗಿರುವ ಬಗ್ಗೆ ಸಹೋದರ ಅರ್ಜುನ್‌ ಅವರು ಪ್ರತಿಮಾ ಅವರಲ್ಲಿ ಪ‍ದೇ ಪದೇ ಕೇಳುತ್ತಿದ್ದರು. ಮನೆಯೊಳಗೆ ಯಾರನ್ನೂ ಬಿಟ್ಟುಕೊಳ್ಳಲು ಪ್ರತಿಮಾ ಅವರು ನಿರಾಕರಿಸಿದ ನಂತರ ಅರ್ಜುನ್ ಮತ್ತು ನೆರೆಯವರ ಶಂಕೆ ಇನ್ನಷ್ಟು ಹೆಚ್ಚಿತ್ತು.

ADVERTISEMENT

‘ಮನೆಯೊಳಗೆ ಪ್ರವೇಶಿಸಬೇಕು ಎಂದು ಜನ ಮುಂದಾದಾಗಲೇ ಪ್ರತಿಮಾ ಬೀಗ ಹಾಕಿ ಹೋಗಿದ್ದರು. ಆದರೆ ಸೇರಿದ್ದ ಜನ ಬೀಗ ಒಡೆದು ಮನೆಯೊಳಗೆ ಹೋದಾಗ ಕೆಟ್ಟ ವಾಸನೆ ಆವರಿಸಿತ್ತು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು’ ಎಂದು ಪ್ರಸಾದ್‌ ತಿಳಿಸಿದ್ದಾರೆ.

ಪೊಲೀಸರ ತಂಡ ಮನೆಯಲ್ಲಿ ಅಡುಗೆ ಕೋಣೆ ಭಾಗವನ್ನು ಕೆಡವಿದಾಗ ಮೋಹಿತ್ ಮೃತದೇಹ ಪತ್ತೆಯಾಯಿತು. ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

‘ಅಕ್ಟೋಬರ್‌ 22 ರಂದು ಗಂಡ ಮೋಹಿತ್‌ನನ್ನು ವೈರ್‌ನಿಂದ ಬಿಗಿದು ಕೊಲೆ ಮಾಡಿದ್ದ ಪ್ರತಿಮಾ ಮನೆಯಲ್ಲೇ ಹೂತು ಹಾಕಿದ್ದರು. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ‌‌‌‌’ ಎಂದು‍ಪ್ರಸಾದ್ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.