ನವದೆಹಲಿ: ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮೂಲಕ ರಾಜಕೀಯದಲ್ಲಿ ಮಹಿಳಾ ಸಬಲೀಕರಣಕ್ಕೆ ಮುಂದಾಗಬೇಕಿದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ.
ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು,ವಿಶ್ವವಿದ್ಯಾಲಯದಲ್ಲಿ ಶೇ 51ರಷ್ಟು ವಿದ್ಯಾರ್ಥಿನಿಯರು ಇರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ವಿವಿಧ ಪ್ರದೇಶಗಳ ತಳ ಸಮುದಾಯಗಳ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಿರುವ ಹೊಸ ಪ್ರವೇಶಾತಿ ನಿಯಮಾವಳಿಯನ್ನೂ ಅವರು ಶ್ಲಾಘಿಸಿದ್ದಾರೆ.
ಶಾಸನಸಭೆಗಳಲ್ಲಿ ಮೀಸಲಾತಿ ನೀಡುವ ಮೂಲಕ ರಾಜಕೀಯ ಕ್ಷೇತ್ರದಲ್ಲೂ ಮಹಿಳಾ ಸಬಲೀಕರಣವನ್ನು ಸಾಧ್ಯವಾಗಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಅಧ್ಯಯನ ತಾಣ: ಕಲಿಕಾ ಕ್ಷೇತ್ರದಲ್ಲಿ ಭಾರತಮತ್ತೆ ವಿಶ್ವದ ಉತ್ತಮ ಸ್ಥಳಗಳಲ್ಲಿ ಒಂದಾಗುವ ಸಮಯ ಬಂದಿದೆ. ಇದು ಸಾಧ್ಯವಾಗಬೇಕಾದರೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಕಲಿಕಾ ವಿಧಾನಗಳನ್ನು ಬದಲಿಸಬೇಕಿದ್ದು, ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕಿದೆ. ಭಾರತದ ನಾಗರಿಕತೆ ಶಿಕ್ಷಣವನ್ನು ಪವಿತ್ರ ಎಂದು ಭಾವಿಸುತ್ತದೆ. ಬಹು ಶಿಸ್ತೀಯ ವಿಧಾನವನ್ನು ಅನ್ವಯಿಕ ಶಿಕ್ಷಣಕ್ಕೆ ಅಳವಡಿಸಬೇಕಿದೆ ಎಂದು ಹೇಳಿದ್ದಾರೆ.
ಪ್ರತಿಭಟನೆ: ವಿಶ್ವವಿದ್ಯಾಲಯದಲ್ಲಿ ಪ್ರವೇಶ ದರ ಹೆಚ್ಚಳ, ಕಡ್ಡಾಯ ಹಾಜರಾತಿ ಮತ್ತು ವಸ್ತ್ರ ಸಂಹಿತೆ ಜಾರಿಗೊಳಿಸಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬ್ಯಾರಿಕೇಡ್ ಅನ್ನು ಮುರಿದುಕಾರ್ಯಕ್ರಮವನ್ನು ಆಯೋಜಿಸಿದ್ದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಸಭಾಂಗಣದ ಆವರಣದ ಒಳಗೆ ನುಗ್ಗಲು ವಿದ್ಯಾರ್ಥಿಗಳು ಯತ್ನಿಸಿದ್ದು, ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.