
ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು ಗೆಲುವು ಸಾಧಿಸಿದ ಬಳಿಕ ಗುಲಾಮಗಿರಿಯ ಕುರುಹುಗಳನ್ನು ನಾಮಾವಶೇಷ ಮಾಡಲಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳವಾರ ತಿಳಿಸಿದ್ದಾರೆ.
ಬಿಹಾರ ಚುನಾವಣೆಯ ಮೊದಲ ಹಂತದ ಮತದಾನದ ಪ್ರಚಾರಕ್ಕೆ ಕೊನೆಯ ದಿನವಾದ ಮಂಗಳವಾರ, ಯೋಗಿ ಆದಿತ್ಯನಾಥ ಅವರು ಮೊಹಿಯುದ್ದೀನ್ನಗರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದರು.
‘ಬಿಹಾರದ ಸಹೋದರ ಹಾಗೂ ಸಹೋದರಿಯರೇ, ಎನ್ಡಿಎ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಮೊಹಿಯುದ್ದೀನ್ನಗರದ ಹೆಸರನ್ನು ಮೋಹನ್ ನಗರ ಎಂದು ಬದಲಾಯಿಸಲಾಗುತ್ತದೆ. ಉತ್ತರ ಪ್ರದೇಶದಲ್ಲೂ ನಾವು ಗುಲಾಮಗಿರಿಯ ಕುರುಹುಗಳನ್ನು ನಾಮಾವಶೇಷ ಮಾಡಿದ್ದೇವೆ’ ಎಂದು ಹೇಳಿದ್ದಾರೆ.
ಬಿಹಾರದಲ್ಲಿರುವ ಇಂಡೋ – ಇಸ್ಲಾಮಿಕ್ ಪ್ರಭಾವಿತ ಹೆಸರುಗಳ ಬದಲಾವಣೆಯಾಗಬೇಕು. ಬಿಜೆಪಿಯು ಈ ನಿಲುವಿನ ಪರವಾಗಿದೆ ಎಂದು ಆದಿತ್ಯನಾಥ ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನ್ಮಸ್ಥಳ ಭಕ್ತಿಯಾರ್ಪುರ್ ಹೆಸರನ್ನು ನಿತೀಶ್ ನಗರ ಎಂದು ಬದಲಾವಣೆ ಮಾಡಬೇಕು ಎಂದು ಬಿಜೆಪಿ ನಾಯಕರು ಮಾಡಿದ್ದ ಮನವಿಯನ್ನು, ಸ್ವತಃ ನಿತೀಶ್ ಕುಮಾರ್ ಅವರೇ ತಿರಸ್ಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.