ADVERTISEMENT

ಅಕ್ರಮ ಮನೆಗಳ ಸಕ್ರಮಕ್ಕೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಸುವರ್ಣ ವಿಧಾನಸೌಧ (ಬೆಳಗಾವಿ): ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಿ, ಆ ಜಮೀನಿನ ಮೇಲಿನ ಹಕ್ಕನ್ನು ಅನುಭವದಾರರಿಗೆ ನೀಡುವ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆಗೆ ವಿಧಾನ ಪರಿಷತ್ ಸೋಮವಾರ ಒಪ್ಪಿಗೆ ನೀಡಿತು.

ಈ ಹಿಂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದ್ದ ಈ ಮಸೂದೆಯನ್ನು ರಾಜ್ಯಪಾಲರು ಪುನರ್ ಪರಿಶೀಲನೆಗೆ ಹಿಂದಿರುಗಿಸಿದ್ದರು. ಪರಿಷತ್‌ನಲ್ಲಿ ಮಸೂದೆಯನ್ನು ಯಥಾವತ್ ಅಂಗೀಕರಿಸಲಾಯಿತು. ಸರ್ಕಾರಿ ಜಮೀನಿನಲ್ಲಿನ ವಾಸದ ಮನೆಗಳ ಅನಧಿಕೃತ ನಿರ್ಮಾಣವನ್ನು ಸಕ್ರಮಗೊಳಿಸುವುದಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1961ರ (1964ರ ಕರ್ನಾಟಕ ಕಾಯ್ದೆ 12) 94-ಸಿ ಪ್ರಕರಣದ ತಿದ್ದುಪಡಿಗಾಗಿ ಈ ಮಸೂದೆ ರೂಪಿಸಲಾಗಿದೆ.

`ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 18 ಕಿ.ಮೀ. ದೂರವಿರುವ, ಹಾಗೂ ಬೆಳಗಾವಿ, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 10 ಕಿ.ಮೀ. ದೂರವಿರುವ, ನಗರಸಭೆಗಳ ವ್ಯಾಪ್ತಿಯಿಂದ 5 ಕಿ.ಮೀ. ದೂರವಿರುವ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲಾಗುವುದು. ಆಶ್ರಯ ವಸತಿ ಯೋಜನೆಯ ನಿಯಮಾವಳಿಗಳು ಈ ಸಕ್ರಮಕ್ಕೆ ಅನ್ವಯ ಆಗಲಿವೆ' ಎಂದು ಕಂದಾಯ ಸಚಿವ ಕೆ.ಎಸ್. ಈಶ್ವರಪ್ಪ ವಿವರಿಸಿದರು.

ಪುರಸಭೆಗಳು ಮತ್ತು ಗ್ರಾಮ ಪಂಚಾಯತಿಗಳ ಹೊರಗಿನ ವರ್ತುಲದಿಂದ 3 ಕಿ.ಮೀ. ಮಿತಿಯೊಳಗೆ ಬರುವ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸುವುದಿಲ್ಲ. 2,400 ಚದರ ಅಡಿಯ ಕಟ್ಟಿದ ಮನೆ ಅಥವಾ ಕಟ್ಟಡ ಪ್ರದೇಶದ ವಾಸ್ತವಿಕವಾಗಿ ಆಕ್ರಮಿತವಾದ ಪ್ರದೇಶ, ಅದರಲ್ಲಿ ಯಾವುದು ಕಡಿಮೆ ಆಗುವುದೋ ಅದನ್ನು ಸಕ್ರಮಗೊಳಿಸಲಾಗುವುದು ಎಂದರು.

`ಈ ಮಸೂದೆಯಿಂದ ಭೂಗಳ್ಳರಿಗೆ ಅನುಕೂಲವಾಗಲಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳ ಕಟ್ಟಡಕ್ಕೆ ಭೂಮಿ ಇಲ್ಲದಂತಾಗಿರುವ ಈ ಸಂದರ್ಭದಲ್ಲಿ ಇಂಥ ಮಸೂದೆ ಅಂಗೀಕರಿಸುವುದು ಬೇಡ. ಇದರಿಂದ ಭೂಗಳ್ಳರು, ರಿಯಲ್ ಎಸ್ಟೇಟ್ ಉದ್ಯಮಿಗಳು ಕಾನೂನಿನಿಂದ ನುಣುಚಿಕೊಳ್ಳಲು ಸಹಾಯವಾಗುತ್ತದೆ' ಎಂದು ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ ಮಸೂದೆ ಅಂಗೀಕಾರಕ್ಕೆ ವಿರೋಧಿಸಿದರು.  ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪಡೆದುಕೊಳ್ಳಲು ಪ್ರೋತ್ಸಾಹ ಸಿಗಬಾರದು ಎಂಬ ಉದ್ದೇಶದಿಂದ ರಾಜ್ಯಪಾಲರು ಈ ಮಸೂದೆಯನ್ನು ಪುನರ್ ಪರಿಶೀಲನೆಗೆ ಕಳುಹಿಸಿದ್ದಾರೆ. ಮುಂಬರುವ ಚುನಾವಣೆ ದೃಷ್ಟಿಯಲ್ಲಿ ಮಸೂದೆ ಅಂಗೀಕರಿಸುವುದು ಸರಿಯಲ್ಲ ಎಂದರು.

`ಆಶ್ರಯ ಮನೆ ಪಡೆಯಲು ಅರ್ಹತೆ ಉಳ್ಳವರು ಅಕ್ರಮ ಮನೆ ಕಟ್ಟಿಕೊಂಡಿದ್ದರೆ ಅಂಥವರಿಗೆ ಹಕ್ಕುಪತ್ರ ನೀಡಬಹುದು. ರಾಜಕೀಯ ಪುಢಾರಿಗಳಿಗೆ, ದಲ್ಲಾಳಿಗಳಿಗೆ ಸಹಾಯ ಆಗಬಾರದು. ಈಗ ಚುನಾವಣೆ ಸಮೀಪ ಇರುವುದರಿಂದ ಈ ಮಸೂದೆಯನ್ನು ತಡೆ ಹಿಡಿಯಬೇಕು' ಎಂದು ಜೆಡಿಎಸ್‌ನ ಎಂ.ಸಿ.ನಾಣಯ್ಯ ಹೇಳಿದರು. `ಹಾವೇರಿಯ ಕೆಜೆಪಿ ಸಮಾವೇಶದ ಪರಿಣಾಮ ಸರ್ಕಾರ ಯಾವಾಗ ಬೀಳಲಿದೆಯೋ ಗೊತ್ತಿಲ್ಲ' ಎಂದು ಕುಟುಕಿದರು.

`ಅಕ್ರಮ-ಸಕ್ರಮ ಯೋಜನೆ ಹಿನ್ನೆಲೆಯಲ್ಲಿ ಅನೇಕ ರಾಜಕೀಯ ವ್ಯಕ್ತಿಗಳು ಈಗಾಗಲೇ ಅರ್ಜಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಡವರು, ತಿಳಿವಳಿಕೆ ಇಲ್ಲದವರು ಅಕ್ರಮ ಮಾಡಿರುವುದು ಕಡಿಮೆ. ಆದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು' ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಹೇಳಿದರು.

ಕಾಂಗ್ರೆಸ್‌ನ ಮೋಟಮ್ಮ ದನಿಗೂಡಿಸಿದರು. ಬಿಜೆಪಿಯ ರಾಮಚಂದ್ರಗೌಡ ಮಧ್ಯ ಪ್ರವೇಶಿಸಿ, ರಾಜ್ಯದಲ್ಲಿರುವ ಬಡವರ ಗತಿ ಏನು ಎಂದು ಪ್ರಶ್ನಿಸಿದರು. ಬಡವರಿಗೆ ವಾಸಿಸಲು ಅವಕಾಶ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಈ ಮಸೂದೆಗೆ ಒಪ್ಪಿಗೆ ನೀಡಬೇಕು . ಭೂಗಳ್ಳರ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.