ADVERTISEMENT

ಅಕ್ರಮ ಶಸ್ತ್ರಾಸ್ತ್ರ: ಹೊರ ರಾಜ್ಯದ ನೆರವು ಕೋರಿದ ಗೃಹಸಚಿವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:41 IST
Last Updated 3 ಮಾರ್ಚ್ 2018, 19:41 IST

ಮೈಸೂರು: ಶಸ್ತ್ರಾಸ್ತ್ರ ಅಕ್ರಮ ಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಲ್ಲಿ ಶನಿವಾರ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಮೂರು ರಾಜ್ಯಗಳಲ್ಲಿ ಶಸ್ತ್ರಸ್ತ್ರಗಳು ಜನಸಾಮಾನ್ಯರಿಗೆ ಸುಲಭವಾಗಿ ಸಿಗುತ್ತಿವೆ. ಭೂಗತ ಪಾತಕಿಗಳಿಗೆ ಗನ್‌, ಪಿಸ್ತೂಲ್‌ಗಳು ಈ ರಾಜ್ಯಗಳಿಂದಲೇ ಸರಬರಾಜು ಆಗುತ್ತಿವೆ. ಸಮಸ್ಯೆಯನ್ನು ಮೂಲದಲ್ಲಿಯೇ ಬಗೆಹರಿಸಿದಾಗ ಮಾತ್ರ ಮಾಫಿಯಾ ನಿಯಂತ್ರಿಸಲು ಸಾಧ್ಯ. ಅಲ್ಲಿನ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

‘ಶಸ್ತ್ರಾಸ್ತ್ರವನ್ನು ಅಕ್ರಮವಾಗಿ ಸಾಗಣೆ ಮಾಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೊರ ರಾಜ್ಯದ ಪೊಲೀಸರೊಂದಿಗೂ ಹಿರಿಯ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಪ್ರತಿನಿಧಿಸುವ ಉತ್ತರಪ್ರದೇಶದಲ್ಲಿಯೇ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ವಿರುದ್ಧವೇ ಕೊಲೆ ಆರೋಪವಿದೆ. ಕರ್ನಾಟಕದ ಕಾನೂನು ಸುವ್ಯವಸ್ಥೆಯನ್ನು ಟೀಕಿಸುವ ಅರ್ಹತೆ ಇವರಿಗೆ ಇಲ್ಲ’ ಎಂದು ಬಿಜೆಪಿಯವರ ಆರೋಪಕ್ಕೆ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.