ಬಾಳೆಹೊನ್ನೂರು: ಅಗ್ರಿಗೋಲ್ಡ್ ಹಣಕಾಸು ಸಂಸ್ಥೆಯಲ್ಲಿ ಹಣ ತೊಡಗಿಸಿದ ಠೇವಣಿದಾರರ ಸಂಪೂರ್ಣ ಮಾಹಿತಿಯನ್ನು ಇದೇ 23ರಂದು ರಾಜ್ಯದ ಪೊಲೀಸ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಎಂದು ಸಿಐಡಿ ಡಿವೈಎಸ್ಪಿ ನಂಜುಂಡೇಗೌಡ ತಿಳಿಸಿದ್ದಾರೆ.
ಅಗ್ರಿ ಗೋಲ್ಡ್ ಕಂಪೆನಿಯಲ್ಲಿ ಹಣ ತೊಡಗಿಸಿದ್ದ ಲಕ್ಷಾಂತರ ಠೇವಣಿದಾರರು ಹಣ ವಾಪಸ್ ಪಡೆಯಲು ವಿಫಲರಾಗಿದ್ದರಿಂದ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆ ವಹಿಸಿತ್ತು.
ರಾಜ್ಯದಾದ್ಯಂತ ಲಕ್ಷಾಂತರ ಜನ ಅಗ್ರಿಗೋಲ್ಡ್ ನಲ್ಲಿ ಹಣ ತೊಡಗಿಸಿದ್ದಾರೆ. ಅಂಧ್ರಪ್ರದೇಶದ ಹೈಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದ್ದು, ಖಾಸಗಿ ಕಂಪೆನಿಯೊಂದು ಅಗ್ರಿಗೋಲ್ಡ್ ಸಂಸ್ಥೆಯನ್ನು ತನ್ನ ವಶಕ್ಕೆ ಪಡೆಯಲು ಮುಂದೆ ಬಂದಿದೆ. ಇದೇ 24ರಂದು ಅಂತಿಮ ನಿರ್ಣಯ ಹೊರಬರುವ ನಿರೀಕ್ಷೆ ಇದೆ ಎಂದು ಅವರು ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜ್ಯದಲ್ಲಿ ಅಗ್ರಿಗೋಲ್ಡ್ ಕಂಪೆನಿಯಲ್ಲಿ ಹಣ ತೊಡಗಿಸಿದ ಗ್ರಾಹಕರ ಎಲ್ಲ ವಿವರವನ್ನು ಪೊಲೀಸ್ ವೆಬ್ಸೈಟ್ನಲ್ಲಿ (www.ksp.gov.in) ಪ್ರಕಟಿಸಲಾಗುತ್ತದೆ. ಹೆಸರು ಬಿಟ್ಟು ಹೋಗಿದ್ದರೆ ಅಂತಹವರು ದಾಖಲೆಗಳನ್ನು ಸಿಐಡಿ ಕಚೇರಿಗೆ ಸಲ್ಲಿಸಿದಲ್ಲಿ ಅದನ್ನು ಅಪ್ ಲೋಡ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.