ADVERTISEMENT

ಅತ್ಯಾಚಾರ: ಆರೋಪಿ ಸುಳಿವಿಗೆ 2 ಲಕ್ಷ ಇನಾಮು

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಉಡುಪಿ: `ಮಣಿಪಾಲ ವಿಶ್ವವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಪೊಲೀಸ್ ಇಲಾಖೆ ವತಿಯಿಂದ ಎರಡು ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ಮಾಹಿತಿ ನೀಡಿದವರ ವಿವರನ್ನು ಗೋಪ್ಯವಾಗಿ ಇಡಲಾಗುತ್ತದೆ' ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಘೋಷಿಸಿದ್ದಾರೆ.

ಶಂಕಿತ ಆರೋಪಿ ರೇಖಾ ಚಿತ್ರವನ್ನು ಬಿಡುಗಡೆ ಮಾಡಿದ ನಂತರ ಉಡುಪಿ ಜಿಲ್ಲೆ, ಕರ್ನಾಟಕ ಮತ್ತು ಕೇರಳ ರಾಜ್ಯಗಳಿಂದ ಹಲವು ಮಂದಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ರೇಖಾ ಚಿತ್ರದಲ್ಲಿ ಇರುವ ವ್ಯಕ್ತಿಯನ್ನೇ ಹೋಲುವ ಏಳು ಮಂದಿಯ ಬಗ್ಗೆ ಜನರು ಮಾಹಿತಿ ನೀಡಿದ್ದರು. ಈ ಎಲ್ಲರನ್ನೂ ವಿಚಾರಣೆ ಮಾಡಿ ಅವರು ಆರೋಪಿಗಳಲ್ಲ ಎಂದು ಖಚಿತಪಡಿಸಿಕೊಳ್ಳಲಾಗಿದೆ.

ಅಲ್ಲದೆ ಕಳೆದ 24 ಗಂಟೆಗಳಲ್ಲಿ 30 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳ ಪತ್ತೆ ಮತ್ತು ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೃತ್ಯ ನಡೆಸಿದ ಬಳಿಕ ಯುವತಿಯನ್ನು ಆಟೊದಲ್ಲಿ ಅಪಾರ್ಟ್‌ಮೆಂಟ್ ಬಳಿ ಕರೆದುಕೊಂಡು ಬರುತ್ತಿದ್ದ ವೇಳೆ ಆಕೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ ಎಂದು ಗೊತ್ತಾಗಿದೆ. ವೈದ್ಯಕೀಯ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು.

ಸಿ.ಸಿ.ಟಿ.ವಿ.ಯಲ್ಲಿ ಸೆರೆಯಾಗಿರುವ ಕೃತ್ಯಕ್ಕೆ ಬಳಸಿದ ಆಟೊದ ವಿಡಿಯೊ ತುಣುಕನ್ನು ಪ್ರದರ್ಶಿಸಲಾಯಿತು. ವಿಡಿಯೊ ತುಣುಕಿನಲ್ಲಿ ಬೈಕ್‌ನಲ್ಲಿ ಇಬ್ಬರು ಹೋಗುತ್ತಿರುವ ದೃಶ್ಯವೂ ಇದೆ. ಇತರರು ಈ ಕೃತ್ಯದಲ್ಲಿ ಪಾಲ್ಗೊಂಡಿರುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಾಹಿತಿ ನೀಡಬೇಕಾದ ದೂರವಾಣಿ ಸಂಖ್ಯೆಗಳು 94808 05448, 97425 12100, 0820 2521 257. ಇ-ಮೇಲ್ spudupi@ksp.gov.in ವಿಳಾಸದ ಮೂಲಕವೂ ಮಾಹಿತಿ  ರವಾನಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.