ಬೆಂಗಳೂರು: ತುಮಕೂರು ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ ಸೇರಿದಂತೆ ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಆರೋಪದ ಮೇಲೆ ಆರು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.
ಈ ಅಧಿಕಾರಿಗಳು ಕೆಲಸ ಮಾಡುವ ಹಾಗೂ ಆಸ್ತಿಪಾಸ್ತಿ ಹೊಂದಿರುವ ದಾವಣಗೆರೆ, ತುಮಕೂರು, ಚಿತ್ರದುರ್ಗ, ಬೀದರ್, ಕಲಬುರ್ಗಿ, ಬೆಳಗಾವಿ, ಬೆಂಗಳೂರು, ಉತ್ತರ ಕನ್ನಡ, ಧಾರವಾಡ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 24 ಸ್ಥಳಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಲಾಗಿದೆ. ಶೋಧ ಕಾರ್ಯಾಚರಣೆ ಮುಗಿದ ಬಳಿಕ ಆಸ್ತಿ ವಿವರ ಬಹಿರಂಗಪಡಿಸಲಾಗು
ವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಯಾವ್ಯಾವ ಅಧಿಕಾರಿಗಳ ಮೇಲೆ ಎಸಿಬಿಯಿಂದ ದಾಳಿ:
ಗೋಪಾಲಕೃಷ್ಣ, ಜಂಟಿ ನಿರ್ದೇಶಕ, ದಾವಣಗೆರೆ– ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ, ದಾವಣಗೆರೆ.
ವಿಜಯಕುಮಾರ ಮಾಶೆಟ್ಟಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಾರಂಜಾ ಕಾಲುವೆ ಯೋಜನೆ, ಹುಮನಾಬಾದ್, ಬೀದರ್ ಜಿಲ್ಲೆ.
ಕಿರಣ್ ಸುಬ್ಬರಾವ್ ಭಟ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಬೆಳಗಾವಿ ಮಹಾನಗರ ಪಾಲಿಕೆ.
ಶ್ರೀಪತಿ ದೊಡ್ಡ ಲಿಂಗಣ್ಣನವರ, ಉಪಮುಖ್ಯ ಭದ್ರತೆ ಮತ್ತು ಜಾಗೃತಾಧಿಕಾರಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಇಕೆಆರ್ಟಿಸಿ), ಕಲಬುರ್ಗಿ.
ಕೀರ್ತಿ ಜೈನ್, ಕಂದಾಯ ನಿರೀಕ್ಷಕ, ಕಳಸ, ಚಿಕ್ಕಮಗಳೂರು ಜಿಲ್ಲೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.