ADVERTISEMENT

ಅನಂತಮೂರ್ತಿಗೆ ಮೊಯ್ಲಿ ತಿರುಗೇಟು

ಪ್ರಧಾನಿ ಅಭ್ಯರ್ಥಿ ಆಯ್ಕೆ ಬಗ್ಗೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 13:11 IST
Last Updated 25 ಸೆಪ್ಟೆಂಬರ್ 2013, 13:11 IST
ಎಂ. ವೀರಪ್ಪಮೊಯ್ಲಿ
ಎಂ. ವೀರಪ್ಪಮೊಯ್ಲಿ   

ಮಂಡ್ಯ: ಪ್ರಧಾನಮಂತ್ರಿ ಅಭ್ಯರ್ಥಿ ಆಯ್ಕೆ ಬಗೆಗೆ ಹೇಳಿಕೆ ನೀಡಲು ಎಲ್ಲರೂ ಸ್ವತಂತ್ರರಾಗಿದ್ದಾರೆ. ಆದರೆ, ತೀರ್ಪು ನೀಡುವುದು ಸರಿಯಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ. ವೀರಪ್ಪಮೊಯ್ಲಿ ಹೇಳಿದರು.

ಜಿಲ್ಲೆಯ ಆದಿಚುಂಚನಗಿರಿ ಮಠದಲ್ಲಿ ಬುಧವಾರ ನಡೆದ ‘ಚುಂಚಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ರಾಹುಲ್‌ಗಾಂಧಿಯೂ ಪ್ರಧಾನಿಯಾಗಲು ಯೋಗ್ಯರಲ್ಲ ಎಂಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್‌. ಅನಂತಮೂರ್ತಿ ಅವರ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂಬುದನ್ನು ಮತದಾರರು ನಿರ್ಧರಿಸುತ್ತಾರೆ. ಆ ಪಕ್ಷಗಳ ಯಾವುದಾದರೂ ಒಬ್ಬರು ಪ್ರಧಾನಿಯಾಗಲೇಬೇಕು. ಇಲ್ಲದಿದ್ದರೆ ಅರಾಜಕತೆ ಉಂಟಾಗುತ್ತದೆ ಎಂದರು.

ಕಾಂಗ್ರೆಸ್‌ ಪಕ್ಷವು ರಾಹುಲ್‌ಗಾಂಧಿ ಅವರನ್ನು ಬಿಂಬಿಸುತ್ತದೆ. ಬಿಜೆಪಿಯು ನರೇಂದ್ರ ಮೋದಿ ಅವರನ್ನು ಬಿಂಬಿಸುತ್ತಿದೆ. ಆಯ್ಕೆ ಮತದಾರರಿಗೆ ಬಿಟ್ಟದ್ದಾಗಿದೆ ಎಂದ ಅವರು, ಲೋಕಸಭೆ ಅವಧಿ ಮುಗಿಯುವುದಕ್ಕೆ ಮುನ್ನ ಚುನಾವಣೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ಚುಂಚಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್‌.ಎಲ್‌. ಭೈರಪ್ಪ,  ಮೇಲು–ಕೀಳು ಆಚರಣೆಯನ್ನು ನಿಲ್ಲಿಸದಿದ್ದರೆ ಹಿಂದೂ ಧರ್ಮವೂ ನಾಶವಾಗುತ್ತದೆ. ಹಿಂದೂಗಳೆಲ್ಲ ಒಂದಾಗಬೇಕು ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.