ADVERTISEMENT

ಅನವಶ್ಯಕ ಇಂಗ್ಲಿಷ್ ಬಳಕೆ ಬೇಡ: ಜಿ.ವೆಂ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 19:20 IST
Last Updated 4 ಫೆಬ್ರುವರಿ 2011, 19:20 IST

ಬೆಂಗಳೂರು: ‘ದೂರದರ್ಶನ ಮತ್ತು ಇತರ ಖಾಸಗಿ ಟಿವಿ ಚಾನೆಲ್‌ಗಳಲ್ಲಿ ಪ್ರಸಾರಗೊಳ್ಳುವ ಧಾರವಾಹಿಗಳು ಮತ್ತು ವಾರ್ತಾ ವಾಚನಗಳಲ್ಲಿ ಕನ್ನಡದ ಶ್ರೀಮಂತಿಕೆಯನ್ನು ಪ್ರಕಟಿಸಬೇಕು. ಇಂಗ್ಲಿಷ್ ಶಬ್ಧಗಳನ್ನು ಅನವಶ್ಯಕವಾಗಿ ಉಪಯೋಗಿಸಬಾರದು’ ಎಂದು 77ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಕರೆ ನೀಡಿದರು.

ಕನ್ನಡ ಬೆಳವಣಿಗೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಅಪಾರ ಎಂದು ತಮ್ಮ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಬಣ್ಣಿಸಿದ ಅವರು, ‘ಪತ್ರಿಕಾಕರ್ತರು ಕನ್ನಡ ಭಾಷೆಯ ಬಗ್ಗೆ ದುಡಿಯಬೇಕಾದ ಕಾಲ ಒದಗಿ ಬಂದಿದೆ. ಪರಿಷತ್ತು ಪತ್ರಿಕಾ ಪ್ರಪಂಚದ ಬಗ್ಗೆ ತುಂಬು ವಿಶ್ವಾಸದಿಂದ ಭಾಷಾ ಬಾಂಧವ್ಯವನ್ನು ಬೆಳೆಸಬೇಕು’ ಎಂದರು. ‘ಧಾರಾವಾಹಿಗಳ ನಟ ನಟಿಯರೂ ಕನ್ನಡದ ನುಡಿಗಟ್ಟುಗಳನ್ನು ಪ್ರಭಾವಯುತವಾಗಿ ಉಪಯೋಗಿಸಿದರೆ ವೀಕ್ಷಕರ ಮನಸ್ಸಿನಲ್ಲಿ ಕನ್ನಡದ ಪ್ರೀತಿ ಮೂಡುತ್ತದೆ’ ಎಂದು ಅವರು ಹೇಳಿದರು.

‘ವಾರ್ತಾ ಪತ್ರಿಕೆಗಳಿಗೆ ಅಗತ್ಯವಾಗುವ ಒಂದು ಇಂಗ್ಲಿಷ್ ಈಡಿಯಂಗಳಿಗೆ ಸಮಾನವಾದ ಕನ್ನಡ ನುಡಿಗಟ್ಟುಗಳನ್ನು  ತಯಾರು ಮಾಡುವ ಒಂದು ವಿಧಾನವಿದೆ. ಇಂಗ್ಲಿಷ್‌ನಿಂದ ವಿವಿಧ ಕ್ಷೇತ್ರಗಳ ಸುದ್ದಿಗಳನ್ನು ವಿಶಿಷ್ಟ ಲೇಖನಗಳನ್ನು ಪಡೆಯುವಾಗ ಆ ಭಾಷೆಯ ಈಡಿಯಂಗಳು ಇರಲಿವೆ. ಆಯಾ ವಿಭಾಗದ ಉಪ ಸಂಪಾದಕರು ಒಂದು ತಿಂಗಳ ಕಾಲ ಹಾಗೆ ಕಂಡು ಬರುವ ಇಂಗ್ಲಿಷ್ ಈಡಿಯಂಗಳನ್ನು ಬೇರೆಯಾಗಿ ದಾಖಲಿಸಿ ಇಟ್ಟರೆ ಒಂದು ದೊಡ್ಡ ಈಡಿಯಂ ಭಂಡಾರ ನಿರ್ಮಾಣವಾಗುತ್ತದೆ. ಆ ಈಡಿಯಂಗಳಿಗೆ ಸಮಾನವಾದ ಕನ್ನಡ ನುಡಿಗಟ್ಟುಗಳನ್ನು ನಾವು ಕೆಲವರು ಭಾಷಾಭ್ಯಾಸಿಗಳು ಸೃಜಿಸಿಕೊಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.