ADVERTISEMENT

ಅಪಘಾತಗಳಲ್ಲಿ 15 ಸಾವು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 20:38 IST
Last Updated 22 ಸೆಪ್ಟೆಂಬರ್ 2013, 20:38 IST

ಬೆಳಗಾವಿ/ ಕುಣಿಗಲ್‌: ಬೆಳಗಾವಿ ಜಿಲ್ಲೆ ಸಂಕೇಶ್ವರ ಮತ್ತು ತುಮಕೂರು ಜಿಲ್ಲೆ ಕುಣಿಗಲ್‌ ಬಳಿ ನಡೆದ ಎರಡು ಅಪಘಾತಗಳಲ್ಲಿ 15 ಮಂದಿ ಸತ್ತಿದ್ದಾರೆ.

ಕುಣಿಗಲ್‌ ಬಳಿ ಅಸುನೀಗಿದ ಎಲ್ಲ ಆರು ಜನ ಒಂದೇ ಕುಟುಂಬದವರು. ಇವರ ಮೈಮೇಲಿನ ಒಡವೆ,  ವಸ್ತುಗಳನ್ನು ದುಷ್ಕರ್ಮಿಗಳು  ದೋಚಿದ್ದಾರೆ.

ಬೆಳಗಾವಿ ವರದಿ: ಕ್ಯಾಂಟರ್‌ ವಾಹನವೊಂದು ಆಯ ತಪ್ಪಿ ರಸ್ತೆ ವಿಭಜಕ ದಾಟಿ ಕಾರು, ಟಾಟಾ ಏಸ್‌ ಹಾಗೂ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಕಾರಣ ಐವರು ಮಹಿಳೆಯರು ಹಾಗೂ ದಂಪತಿ ಸೇರಿ ಒಂಬತ್ತು ಮಂದಿ ಮೃತಪಟ್ಟು, ಏಳು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾಲ್ಲೂಕಿನ ವಂಟಮೂರಿ ಘಾಟ್‌ನಲ್ಲಿ ಭಾನುವಾರ ಸಂಭವಿಸಿದೆ.

ಬೆಳಗಾವಿಯ ಉದ್ಯಮಬಾಗ್‌ ನಿವಾಸಿಗಳಾದ ಪದ್ಮಾ ಅಶೋಕ ದೊಡ್ಡಮನಿ (40), ರೇಣುಕಾ ಪೂಜಾರಿ, ಕಮಲಾ ಕೋಮಲ್‌ ಕಟಕುಗೋಳ (45), ಮಾಲುಕೃಷ್ಣ ಅಪ್ಪುಗೋಳ (43), ಇಂದುಮತಿ ಪೂಜಾರ (55), ತಾಲ್ಲೂಕಿನ ಮಚ್ಚೆ ಗ್ರಾಮದ ಸ್ಮಿತಾ ವಿಜಯ ಕನ್ನೂಕರ (27), ವಿಜಯ ಕನ್ನೂಕರ (32) ಟಿಳಕವಾಡಿಯ ಪ್ರದೀಪ ಶಿವಬಸಪ್ಪ ಕರೋಶಿ (20), ಅನಗೋಳದ ಅಭಿಜಿತ ಅನಂತ ದೇವಣ್ಣ (28) ಮೃತ ಪಟ್ಟಿದ್ದಾರೆ. ಸ್ಥಳದಲ್ಲಿಯೇ ಮೂವರು, ಜಿಲ್ಲಾ ಆಸ್ಪತ್ರೆಯಲ್ಲಿ 6 ಮಂದಿ ಅಸು ನೀಗಿದರು.

ಬೆಳಗಾವಿಯಿಂದ ಕೊಲ್ಹಾಪುರದ ಕಡೆಗೆ ಹೊರಟಿದ್ದ ಕ್ಯಾಂಟರ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಸಂಕೇಶ್ವರದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ, ಕಾರಿಗೆ ನಂತರ ಟಾಟಾ ಏಸ್‌ಗೆ ಡಿಕ್ಕಿ ಹೊಡೆದಿದೆ.

ನಂತರ ರಸ್ತೆಯ ತಡೆಗೋಡೆಗೆ ಬಡಿದು ಕ್ಯಾಂಟರ್‌ ಉರುಳಿ ಬಿದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಹಾಗೂ ಟಾಟಾ ಏಸ್‌ ವಾಹನಗಳು ನಜ್ಜುಗುಜ್ಜಾಗಿವೆ. ದ್ವಿಚಕ್ರ ವಾಹನದ ಮುಂದಿನ ಚಕ್ರ ಮುದುಡಿಕೊಂಡಿದೆ.

ಕಾರು ಹಾಗೂ ಟಾಟಾ ಏಸ್‌ ವಾಹನದಲ್ಲಿದ್ದವರು ಸಂಕೇಶ್ವರದ ನೀಲಗಾರ ಗಣಪತಿಯ ದರ್ಶನ ಪಡೆದು ಮರಳಿ ಬೆಳಗಾವಿಗೆ ಹಿಂತಿರುಗುತ್ತಿದ್ದರು.

ಟಾಟಾ ಏಸ್‌ನಲ್ಲಿದ್ದವರ ಮೃತ ದೇಹಗಳು ವಾಹನದೊಳಗೆ ಹಾಗೂ ಬಾಗಿಲಡಿಯಲ್ಲಿ ಸಿಕ್ಕಿ ಕೊಂಡಿದ್ದವು. ಮೃತ ದೇಹಗಳನ್ನು ಹೊರ ತೆಗೆಯಲು ಪೊಲೀಸರು ಪರ ದಾಡಬೇಕಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ನೆರವಾದರು. ಅಪಘಾತ ದಿಂದಾಗಿ ಹೆದ್ದಾರಿಯಲ್ಲಿ ಸುಮಾರು 40 ನಿಮಿಷ ವಾಹನ ಸಂಚಾರ ಅಸ್ತ ವ್ಯಸ್ತಗೊಂಡಿತ್ತು. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಣಿಗಲ್ ವರದಿ: ರಾಷ್ಟ್ರೀಯ ಹೆದ್ದಾರಿ 48ರ ಚೊಟ್ನಹಳ್ಳಿ ಬಳಿ ಭಾನುವಾರ ಮುಂಭಾಗದ ಟೈರ್ ಸಿಡಿದ ಮಾರುತಿ ಸ್ವಿಫ್ಟ್ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸುಮಾರು 40 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಉರುಳಿತು. ಇದರಿಂದಾಗಿ ಕಾರಿನಲ್ಲಿದ್ದ ಮಂಜುನಾಥ್ (34), ಪುಷ್ಪಲತಾ (28), ಶ್ರೀನಿವಾಸ್ (30) ಅನಿತಾ (24), ಪ್ರೀತಂ (4) ಮತ್ತು ಐದು ತಿಂಗಳ ಮಗು ಮೃತರಾದರು.

ಇವರಲ್ಲಿ ಅನಿತಾ, ಪುಷ್ಪಲತಾ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರಿನ ರಾಜೇಗೌಡ ಅವರ ಪುತ್ರಿಯರಾಗಿದ್ದು, ರಜೆಯ ಕಾರಣ ಕುಟುಂಬ ಸಮೇತ ಗ್ರಾಮಕ್ಕೆ ತೆರಳಿದ್ದರು. ಇಬ್ಬರೂ ಬೆಂಗಳೂರಿನ ಗಾರ್ಮೆಂಟ್‌ ನೌಕರರು ಎನ್ನಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.