ಮಂಗಳೂರು: ಇಲ್ಲಿನ ಉಳ್ಳಾಲದ ಅಳಿವೆಯಲ್ಲಿ ಶಾಶ್ವತ ಕಡಲ್ಕೊರೆತ ತಡೆ ಕಾಮಗಾರಿ ನಡೆಸುತ್ತಿದ್ದ ಬೃಹತ್ ಬಾರ್ಜ್ (ಹಡಗಿನ ಮಾದರಿಯ ನೌಕೆ) ಸಮುದ್ರ ತೀರದಿಂದ 300 ಮೀಟರ್ ದೂರದಲ್ಲಿ ಅಪಘಾತಕ್ಕೀಡಾಗಿ ಮುಳುಗುವ ಸ್ಥಿತಿಯಲ್ಲಿದೆ. ಅಪಾಯಕ್ಕೆ ಸಿಲುಕಿರುವ ಅದರಲ್ಲಿದ್ದ 27 ಮಂದಿ ಪೈಕಿ ನಾಲ್ವರನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ.
ಮಧ್ಯಾಹ್ನ 1.30ಕ್ಕೆ ಬಾರ್ಜ್ ಅಪಘಾತಕ್ಕೀಡಾಗಿದೆ. ಸಂಜೆ 6.30ರ ಸುಮಾರಿಗೆ ಕಾವಲುಪಡೆ ಹಡಗು ಮತ್ತು ದೋಣಿಗಳು ಸ್ಥಳಕ್ಕೆ ಬಂದಿವೆ. ಆದರೆ, ಬಾರ್ಜ್ ಇರುವ ಪ್ರದೇಶದಲ್ಲಿ ಕಲ್ಲುಗಳಿರುವ ಕಾರಣ ಹಡಗನ್ನು ಬಳಸಲಾಗಲಿಲ್ಲ. ತುರ್ತು ಸಮಯದ ಬಳಕೆಗಾಗಿ ಇರಿಸಿಕೊಂಡಿದ್ದ ಸಣ್ಣ ದೋಣಿ ಮೂಲಕ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ನಾಲ್ಕು ಜನರನ್ನು ರಕ್ಷಿಸಲಾಗಿದೆ. ನಂತರ ಸಮುದ್ರದಲ್ಲಿ ಅಲೆಗಳ ಅಬ್ಬರ ಜಾಸ್ತಿಯಾಗಿದ್ದು, ಕಾರ್ಯಾಚರಣೆ ಮುಂದುವರಿಸಲು ತೊಡಕಾಗಿದೆ.
ನೌಕೆಯನ್ನು ನಿಲುಗಡೆ ಮಾಡಲು ಹಾಕಿದ್ದ ಲಂಗರು ಅಲೆಗಳ ಅಬ್ಬರಕ್ಕೆ ತುಂಡಾಗಿದೆ. ನಿಯಂತ್ರಣ ಕಳೆದುಕೊಂಡ ಬಾರ್ಜ್, ತಡೆಗೋಡೆಗೆ ಬಳಸಿರುವ ಕಲ್ಲುಗಳಿಗೆ ಡಿಕ್ಕಿ ಹೊಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.