ADVERTISEMENT

ಅಯೋಧ್ಯೆ: ರಾಜಿ ಸಾಧ್ಯವೇ ಇಲ್ಲ

ಚಿದಂಬರ ಪ್ರಸಾದ್
Published 24 ನವೆಂಬರ್ 2017, 19:30 IST
Last Updated 24 ನವೆಂಬರ್ 2017, 19:30 IST

ಉಡುಪಿ: ಅಯೋಧ್ಯೆಯ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಶ್ರೀ ಶ್ರೀ ರವಿಶಂಕರ ಗುರೂಜಿ ಸ್ವಯಂಪ್ರೇರಿತ ರಾಗಿ ಮಧ್ಯಸ್ಥಿಕೆ ವಹಿಸಿದ್ದು, ಇದರಲ್ಲಿ ವಿಶ್ವ ಹಿಂದೂ ಪರಿಷತ್ ನ ಯಾವುದೇ ಪಾತ್ರವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಚಂಪತರಾಯ್ ಸ್ಪಷ್ಟಪಡಿಸಿದರು.

ಶುಕ್ರವಾರ ಸಂಜೆ ನಡೆದ ಧರ್ಮ ಸಂಸತ್‌ನಲ್ಲಿ ಸಂತರ ಗೋಷ್ಠಿಗಳ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರವೇ ನಿರ್ಮಾಣ ಆಗಬೇಕು ಎಂಬುದು ಸಂತರ ನಿರ್ಧಾರವಾಗಿದೆ. ಈ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ರಾಮ ಮಂದಿರ ಹೋರಾಟ ಅಂತಿಮ ಹಂತಕ್ಕೆ ತಲುಪಿದ್ದು, ಪೇಜಾವರ ಶ್ರೀಗಳು ಮುಂದಿನ ವರ್ಷ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಘೋಷಿಸಿರುವುದಾಗಿ ತಿಳಿಸಿದರು.

ADVERTISEMENT

‘ಸುಪ್ರೀಂ ಕೋರ್ಟ್ ಕಾನೂನಿನ ಆಧಾರದಲ್ಲಿಯೇ ತೀರ್ಪು ನೀಡಬೇಕು. ಕೋಟ್ಯಂತರ ಜನರಿಗೆ ಈಗಾಗಲೇ ತಿಳಿಸಿರುವ ಮಾದರಿಯಲ್ಲಿಯೇ ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದು ಸಂತರ ಆಗ್ರಹವಾಗಿದೆ‘ ಎಂದರು.

ರಾಮ ಜನ್ಮಭೂಮಿ ವಿವಾದ ಎರಡು ಸಮುದಾಯಗಳ ನಡುವಿನದ್ದು. ಇಲ್ಲಿ ರಾಮಮಂದಿರವೇ ನಿರ್ಮಾಣ ಆಗಬೇಕು. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಹಿಂದೂ ಮಠ, ಮಂದಿರಗಳ ಆಡಳಿತ ನಡೆಸುವುದು ಸರ್ಕಾರಗಳ ಕೆಲಸವಲ್ಲ. ಮಂದಿರಕ್ಕೆ ಭಕ್ತರು ನೀಡುವ ಕಾಣಿಕೆ ಮಂದಿರಗಳಿಗೆ ಸೇರಿದ್ದೇ ಹೊರತು ಸರ್ಕಾರಗಳ ಬಜೆಟ್‌ನ ಭಾಗವಲ್ಲ ಎಂದು ತಿಳಿಸಿದರು.

ಧರ್ಮ ಸಂಸತ್‌ ನಲ್ಲಿ ಅಸ್ಪೃಶ್ಯತೆ ನಿವಾರಣೆ, ಪರಿಸರ, ಗೋಹತ್ಯೆ ನಿಷೇಧ, ಹೆಣ್ಣು ಭ್ರೂಣ ಹತ್ಯೆ ನಿಷೇಧ ಹಾಗೂ ಧರ್ಮ ಸಂಸ್ಕಾರಗಳನ್ನು ಜೀವಂತವಾಗಿ ಇಡುವ ಬಗ್ಗೆಯೂ ಚರ್ಚೆ ಮಾಡಲಾಗಿದೆ ಎಂದರು. ದೇಶದಲ್ಲಿ ಬಹುಸಂಖ್ಯಾತ- ಅಲ್ಪ ಸಂಖ್ಯಾತ ಎಂಬ ಭೇದ ಭಾವ ಸಂಪೂರ್ಣವಾಗಿ ನಿವಾರಣೆ ಆಗಬೇಕು. ಈ ಬಗ್ಗೆ ಸಂವಿಧಾನದ ಸಂಶೋಧನೆ ನಡೆಸಿ, ಸರಿಯಾದ ನಿರ್ಣಯ ತೆಗೆದುಕೊಳ್ಳಬೇಕು ಎಂದು ಧರ್ಮ ಸಂಸದ್ ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು. ವಿಶ್ವ ಹಿಂದೂ ಪರಿಷತ್ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.