ADVERTISEMENT

ಅರಣ್ಯದತ್ತ ಆನೆ ಹಿಂಡು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಮೈಸೂರು: ಎರಡು ದಿನಗಳಿಂದ ಮೈಸೂರಿನ ಹೊರವಲಯದಲ್ಲಿ ಬೀಡುಬಿಟ್ಟು ಆತಂಕ ಮೂಡಿಸಿದ್ದ ಕಾಡಾನೆ ಹಿಂಡನ್ನು ಸಾಕಾನೆಗಳ ಸಹಾಯದಿಂದ ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿಯತ್ತ ಅಟ್ಟಲಾಗಿದೆ.

ಮಂಗಳವಾರ ನಂಜನಗೂಡು ರಸ್ತೆಯ ತೋಟದಲ್ಲಿ ಅಡಗಿದ್ದ ಆನೆಗಳನ್ನು ಅಟ್ಟುವ ಕಾರ್ಯಾಚರಣೆ ನಿರೀಕ್ಷಿತ ಫಲ ನೀಡಲಿಲ್ಲ. ಆದರೆ, ಮೂರನೇ ದಿನವಾದ ಬುಧವಾರ ಮೈಸೂರು ತಾಲ್ಲೂಕಿನ ಚಿಕ್ಕರಸನಕೆರೆ ಬೆಟ್ಟ ದಲ್ಲಿ ಅಡಗಿದ್ದ ಆನೆ ಹಿಂಡನ್ನು ಬೆನ್ನಟ್ಟಿರುವ ಸಿಬ್ಬಂದಿ, ಬಂಡೀಪುರ ಅರಣ್ಯದತ್ತ ಅಟ್ಟುವ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿಸಿ ದ್ದಾರೆ.

ಮೈಸೂರು ಹೊರವಲಯದ ತೋಟದ ಲ್ಲಿದ್ದ ಆನೆ ಹಿಂಡನ್ನು ಮಂಗಳ­ವಾರ ಕೊಪ್ಪ ಲೂರು, ರಮಾಬಾಯಿ­ನಗರ, ಶ್ರೀನಗರ, ಉದ್ಬೂರು, ತಾಲ್ಲೂಕಿನ ಚಿಕ್ಕರಸನಕೆರೆ ವರೆಗೂ ಅಟ್ಟಲಾಗಿತ್ತು.

ಆದರೆ, ಸಮೀಪದ ಚಿಕ್ಕರಸನಕೆರೆ ಬೆಟ್ಟವನ್ನು ಬುಧವಾರ ಆನೆಹಿಂಡು ಹೊಕ್ಕಿದ್ದ­ರಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾ­ದರೆ, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು.

ಚಿಕ್ಕರಸನಕೆರೆ ಬೆಟ್ಟದಲ್ಲಿದ್ದ ಆನೆ ಹಿಂಡನ್ನು ಹೊರಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ 7 ಗಂಟೆಗೆ ಪಟಾಕಿ–ಸಿಡಿಮದ್ದಿನೊಂದಿಗೆ ಕಾರ್ಯಾ­ಚರಣೆ ಆರಂಭಿಸಿತು. ಸತತ 5 ಗಂಟೆಗಳ ಕಾರ್ಯಾಚರಣೆ ನಡೆಸಿದ ಬಳಿಕ ಮಧ್ಯಾಹ್ನ 12ರ ವೇಳೆಗೆ ಮೈಸೂರು ತಾಲ್ಲೂಕಿನ ಗಡಿ ಗ್ರಾಮ ಗುಜ್ಜೇಗೌಡನಪುರ ದಾಟಿಸಿ, ನಂಜನಗೂಡು ತಾಲ್ಲೂಕು ಅಹಲ್ಯಾ ಗ್ರಾಮ, ಕಾಡನಹಳ್ಳಿ ನಂತರ ಮೈಸೂರು ಮತ್ತು ಎಚ್‌.ಡಿ. ಕೋಟೆ ಗಡಿಯ ಕಬಿನಿ ನದಿವರೆಗೂ ಅಟ್ಟಲಾಯಿತು.
ನಿಷೇಧಾಜ್ಞೆ ಜಾರಿ: ಆನೆ ಕಾಡಿಗೆ ಅಟ್ಟುವ ಕಾರ್ಯಾ-­ಚರಣೆ ನಡೆಯುತ್ತಿದ್ದರಿಂದ ಮೈಸೂರು ಮತ್ತು ನಂಜನಗೂಡು ತಾಲ್ಲೂಕು ಗಡಿ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.

ಜನಜಾತ್ರೆ: ಚಿಕ್ಕರಸನಕೆರೆ ಬೆಟ್ಟಕ್ಕೆ ಆನೆ ಹಿಂಡು ನುಗ್ಗಿರುವ ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಬರತೊ­ಡಗಿದರು. ಕಾರ್ಯಾಚರಣೆಗೆ ಅಡ್ಡಿಯಾಗುವು­ದರಿಂದ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜನರನ್ನು ಚಿಕ್ಕರಸನಕೆರೆ ಬೆಟ್ಟದತ್ತ ಬಿಡಲಿಲ್ಲ.

‘ಮೈಸೂರು ಮತ್ತು ಎಚ್‌.ಡಿ ಕೋಟೆ ತಾಲ್ಲೂಕಿನ ಗಡಿಭಾಗದಲ್ಲಿ ಇರುವ ಕಬಿನಿ ನದಿವರೆಗೆ ಆನೆ ಹಿಂಡನ್ನು ಓಡಿಸಲಾಗಿದೆ. ಎಚ್‌.ಡಿ. ಕೋಟೆ ತಾಲ್ಲೂಕಿನ ಚಿಕ್ಕದೇವನಬೆಟ್ಟ ಅರಣ್ಯ ವ್ಯಾಪ್ತಿಯಿಂದ ಬಂಡೀಪುರ ಅರಣ್ಯ ವಲಯಕ್ಕೆ ಆನೆ ಹಿಂಡನ್ನು ಅಟ್ಟಲಾಗು­ವುದು. ಕಾರ್ಯಾಚರಣೆ ರಾತ್ರಿ ವೇಳೆ ಮುಂದುವರಿಯಲಿದೆ’ ಎಂದು  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.