ADVERTISEMENT

`ಅರ್ಹರಿಗೆ ಮತ ನೀಡದಿದ್ದರೆ ಭವಿಷ್ಯ ಅತಂತ್ರ'

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:27 IST
Last Updated 23 ಏಪ್ರಿಲ್ 2013, 19:27 IST

ಮಂಡ್ಯ: `ಮತ ಶಕ್ತಿಯುತವಾದ ಆಯುಧ. ಇದನ್ನು ಸಮಾನತೆ, ಸಾಮರಸ್ಯ ಹಾಗೂ ಒಳ್ಳೆಯ ಜನಪ್ರತಿನಿಧಿಗಳ ಆಯ್ಕೆಗಾಗಿ ಬಳಸಿ' ಎಂದು ಸಾಹಿತಿ ದೇವನೂರ ಮಹಾದೇವ ಸಲಹೆ ನೀಡಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ನಗರದ ಗಾಂಧಿ ಭವನದಲ್ಲಿ ಬಿ.ಆರ್.ಅಂಬೇಡ್ಕರ್ ಅವರ 122ನೇ ಜಯಂತಿ ನಿಮಿತ್ತ ಮಂಗಳವಾರ ಆಯೋಜಿಸಿದ್ದ `ಭಾರತದ ವಿಮೋಚನಾ ದಿನ' ಉದ್ಘಾಟಿಸಿ ಮಾತನಾಡಿದರು.

ಅರ್ಹರಿಗೆ ಮತ ನೀಡದಿದ್ದರೆ, ಬದುಕು ಕಷ್ಟವಾಗಲಿದೆ. ಕುಲಗೆಟ್ಟಿರುವ ಇಂದಿನ ಜನತಂತ್ರ ವ್ಯವಸ್ಥೆ ಸರಿ ಪಡಿಸುವಲ್ಲಿ ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಬೇಕು ಎಂದರು.

ಅಂಬೇಡ್ಕರ್ ನೀಡಿದ `ಒಂದು ವ್ಯಕ್ತಿ-ಒಂದು ಮೌಲ್ಯ'ದ ಪರಿಕಲ್ಪನೆ ಇಂದಿಗೂ ಸಾಕಾರಗೊಂಡಿಲ್ಲ. ಪರಿಣಾಮ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕವಾಗಿ ಸಮಾನತೆ ದೊರೆತಿಲ್ಲ ಎಂದು ವಿಷಾದಿಸಿದರು.

ಕತ್ತಲೆಯಲ್ಲಿದ್ದ ಸಮುದಾಯವನ್ನು ಬೆಳಕಿನೆಡೆಗೆ ಒಯ್ಯಲು ಈ ಪರಿಕಲ್ಪನೆ ನೀಡಿದರೇ ವಿನಾ ವೈಯಕ್ತಿಕವಾಗಿ ಹಣ-ಆಸ್ತಿ ಮಾಡುವುದಕ್ಕಾಗಿ ಅಂಬೇಡ್ಕರ್ ಹೀಗೆ ಹೇಳಲಿಲ್ಲ ಎಂದರು.

ಅಂಬೇಡ್ಕರ್ ಅವರು ಹೊಣೆಗಾರಿಕೆ ಮತ್ತು ಎಚ್ಚರಿಕೆಯ ಸಂಕೇತ'ವಾಗಿದ್ದರು. ಆದರೆ, ಇಂದಿನ ವ್ಯವಸ್ಥೆಯಲ್ಲಿ ಜವಾಬ್ದಾರಿ ಮತ್ತು ಎಚ್ಚರಿಕೆ ಎರಡೂ ಕಾಣುತ್ತಿಲ್ಲ ಎಂದು ವಿಷಾದಿಸಿದರು.

ರೈತ ಸಂಘದ ರಾಜ್ಯ ಘಟಕ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ, ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ, ಬಡಗಲಪುರ ನಾಗೇಂದ್ರ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಪ್ರೊ. ಎಂ.ಎಸ್.ಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.