ADVERTISEMENT

ಅವಧಿಗೆ ಮುನ್ನವೇ ಕೆಆರ್‌ಎಸ್ ಬರಿದು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಮೈಸೂರು: ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಜೀವನಾಡಿಯಾಗಿರುವ ಕೃಷ್ಣರಾಜಸಾಗರ (ಕೆ.ಆರ್.ಎಸ್) ಜಲಾಶಯದಲ್ಲಿ ಅವಧಿಗೂ ಮುನ್ನವೇ ನೀರಿನ ಮಟ್ಟದಲ್ಲಿ ಗಣನೀಯ ಇಳಿಕೆಯಾಗಿದೆ.

ಭಾನುವಾರ ಜಲಾಶಯದ ನೀರಿನ ಮಟ್ಟ 103.41 ಅಡಿಗೆ ಇಳಿದಿತ್ತು. ಕಳೆದ ವರ್ಷ ಇದೇ ದಿನ 111.64 ಅಡಿ ಇತ್ತು. ನೀರಿನ ಒಳಹರಿವು 1190 ಕ್ಯೂಸೆಕ್ ಇದ್ದು, ಕಳೆದ ವರ್ಷ ಇದೇ ದಿನ 1240 ಕ್ಯೂಸೆಕ್ ಇತ್ತು.

ಅದೇ ರೀತಿ ನೀರಿನ ಹೊರ ಹರಿವಿನ ಪ್ರಮಾಣ 3441 ಕ್ಯೂಸೆಕ್ ಇದ್ದು, ಕಳೆದ ವರ್ಷ 964 ಕ್ಯೂಸೆಕ್ ಇತ್ತು. ಈ ಬಾರಿ ಒಳ ಹರಿವು ಕಡಿಮೆ ಆಗಿದ್ದು, ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯದ ನೀರಿನ ಮಟ್ಟ ದಿನೇ ದಿನೇ ಕಡಿಮೆ ಆಗುತ್ತಿರುವುದರಿಂದ ಮಂಡ್ಯ ಜಿಲ್ಲೆಯಲ್ಲಿ ಬತ್ತ, ಕಬ್ಬು ಬೆಳೆದಿರುವ ರೈತರಲ್ಲಿ ಆತಂಕ ಮನೆಮಾಡಿದೆ.

ನೀರಿನ ಬವಣೆ ನೀಗಿಸಲು ಕಟ್ಟು ನೀರು ಪದ್ಧತಿಯನ್ನು ಜಾರಿಗೆ ತರಲಾಗಿದೆ. ತಿಂಗಳ 20 ದಿನ ನೀರು ಹರಿಬಿಡಲಾಗುತ್ತಿದ್ದು, 10 ದಿನ ನೀರು ಬಿಡುವುದಿಲ್ಲ. ವಿಶ್ವೇಶ್ವರಯ್ಯ ನಾಲೆ, ಸಿಡಿಎಸ್ ನಾಲೆ, ವಿರಿಜಾ ನಾಲೆ, ಆರ್‌ಬಿಎಲ್‌ಎಲ್ ಹಾಗೂ ಕೆಬಿಎಲ್‌ಎಲ್ ನಾಲೆಗಳಿಗೆ 20 ದಿನ ನೀರು  ಪೂರೈಕೆ ಮಾಡಲಾಗುತ್ತಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೊಸದಾಗಿ ಬತ್ತ ನಾಟಿ ಮಾಡದಂತೆ ಈ ಭಾಗದ ರೈತರಿಗೆ ಸೂಚಿಸಿದ್ದಾರೆ.

ಮೈಸೂರು ನಗರದ ಮುಕ್ಕಾಲು ಭಾಗದ ಜನರಿಗೆ ಕುಡಿಯುವ ನೀರು ಪೂರೈಸಲು ಕೆ.ಆರ್.ಎಸ್. ಜಲಾಶಯವನ್ನೇ ಅವಲಂಬಿಸಲಾಗಿದೆ. ಮಾರ್ಚ್ ಎರಡನೇ ವಾರದಲ್ಲೇ ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.