ಗದಗ: ತಾಂತ್ರಿಕ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದ ಕೇಂದ್ರ ಸರ್ಕಾರದ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯು (ಆರ್ಎಸ್ಬಿವೈ) ರಾಜ್ಯದಲ್ಲಿ ಮತ್ತೆ ಜಾರಿಯಾಗಲಿದೆ.
ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ಒದಗಿಸುವ ಈ ಯೋಜನೆ ಮೊದಲು 2009–10ನೇ ಸಾಲಿನಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಜಾರಿಯಾಗಿತ್ತು. ನಂತರದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗಿತ್ತು. ಆದರೆ 2012–13ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡದ ಕಾರಣ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು.
ಪ್ರಸಕ್ತ ವರ್ಷದಿಂದ ರಾಜ್ಯದಲ್ಲಿ ಮತ್ತೆ ಆರ್ಎಸ್ಬಿವೈ ಅನುಷ್ಠಾನಗೊಳಿಸುತ್ತಿದ್ದು, ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಚಿಕಿತ್ಸೆಗೆ ಅರ್ಹವಾದ ಕಾಯಿಲೆಗಳ ಸಂಖ್ಯೆಯನ್ನು 1,050 ರಿಂದ 1,516ಕ್ಕೆ ಹೆಚ್ಚಿಸಲಾಗಿದೆ. 32 ಕೆಬಿಯಿಂದ 64 ಕೆಬಿ ಸ್ಮಾರ್ಟ್ ಕಾರ್ಡ್ ಹಾಗೂ ಕಾರ್ಡ್ ಅವಧಿಯನ್ನು ಒಂದು ವರ್ಷದಿಂದ 3 ವರ್ಷಕ್ಕೆ ವಿಸ್ತರಿಸಲಾಗಿದೆ.
ಬಿಪಿಎಲ್ ಕುಟುಂಬಗಳು, ನರೇಗಾ ಕಾರ್ಮಿಕರು, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ ಪಡೆಯುವವರು, ರೈಲ್ವೆ ಇಲಾಖೆಯ ಚಿಲ್ಲರೆ ಮಾರಾಟಗಾರರು, ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಬೀಡಿ ಕಾರ್ಮಿಕರು, ಗೃಹ ಕಾರ್ಮಿಕರು, ಪೋಸ್ಟ್ಮನ್, ಆಟೊ, ಟ್ಯಾಕ್ಸಿ ಚಾಲಕರು, ಸೈಕಲ್ ರಿಕ್ಷಾ ತಳ್ಳು ವವರು, ಚಿಂದಿ ಆಯುವವರು, ಗಣಿ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಯೋಜನೆಯ ಫಲಾನುಭವಿಗಳು.
ಫಲಾನುಭವಿಗಳಿಗೆ ಅವರ ಬೆರಳುಗುರುತು ಮತ್ತು ಛಾಯಾಚಿತ್ರ ಇರುವ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಕಾರ್ಡ್ ಹೊಂದಿದ ಫಲಾನುಭವಿ ದೇಶದ ಯಾವುದೇ ಭಾಗದಲ್ಲಿ ಆರ್ಎಸ್ಬಿವೈ ಗುರುತಿಸಿರುವ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಒಳರೋಗಿಯಾಗಿ ಚಿಕಿತ್ಸೆ ಪಡೆಯಬಹುದು. ಕುಟುಂಬದ ಸದಸ್ಯರು ಬೇರೆ ಕಡೆ ವಾಸವಿದ್ದಲ್ಲಿ, ಅಂತಹ ಸಂದರ್ಭದಲ್ಲಿ ವಿಭಜಸಿ (ಸ್ಪ್ಲಿಟ್) ಕಾರ್ಡ್ ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ವಿಮಾ ಮೊತ್ತ ಪ್ರತಿ ಕುಟುಂಬಕ್ಕೆ ವಾರ್ಷಿಕ ₨ 30,000 ಮಾತ್ರ. ಕುಟುಂಬದ ಮುಖ್ಯಸ್ಥ, ಪತ್ನಿ ಹಾಗೂ ಮೂವರು ಅವಲಂಬಿತರು (ಮಕ್ಕಳು ಸೇರಿದಂತೆ) ಒಟ್ಟು ಐದು ಮಂದಿ ಒಳರೋಗಿಗಳಾಗಿ ಈ ಹಣದ ಮಿತಿಯೊಳಗೆ ವೈದ್ಯಕೀಯ ಸೌಲಭ್ಯ ಪಡೆಯಬಹುದು.
ಗುರುತಿಸಿರುವ 1,516 ಕಾಯಿಲೆಗಳಿಗೆ ಚಿಕಿತ್ಸೆ ಇದೆ. ಹೆರಿಗೆ ಹಾಗೂ ನವಜಾತ ಶಿಶುಗಳಿಗೂ ಈ ಸೌಲಭ್ಯ ಅನ್ವಯಿಸಲಿದೆ. ಗದಗ ಜಿಲ್ಲೆಯ 2,39,752 ಫಲಾನುಭವಿಗಳು ಸೇರಿದಂತೆ ರಾಜ್ಯದಾದ್ಯಂತ ಒಟ್ಟು 1,12,46,344 ಫಲಾನುಭವಿಗಳು ಯೋಜನೆ ಸೌಲಭ್ಯ ಪಡೆಯಲಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರ, ವಿಮಾ ಕಂಪೆನಿ ಹಾಗೂ ಟಿಪಿಎ ಸಹಕಾರದೊಂದಿಗೆ ಗುರುತಿಸಿರುವ ಆಸ್ಪತ್ರೆ ಗಳಲ್ಲಿ ಫಲಾನುಭವಿ ಕುಟುಂಬದವರಿಗೆ ಆರೋಗ್ಯ ವಿಮಾ ಸೌಲಭ್ಯ ಒದಗಿಸುವುದು ಯೋಜನೆ ಉದ್ದೇಶ. ಯೋಜನೆಗೆ ತಗಲುವ ಪ್ರೀಮಿಯಂ ಮೊತ್ತದಲ್ಲಿ ಶೇ 75ರಷ್ಟು ಕೇಂದ್ರದಿಂದ ಹಾಗೂ ಉಳಿದದ್ದನ್ನು ರಾಜ್ಯ ಸರ್ಕಾರ ಭರಿಸುತ್ತದೆ.
ಹೈಟೆಕ್ ಆಸ್ಪತ್ರೆಗಳಲ್ಲೂ ಚಿಕಿತ್ಸೆ: ‘ಆರ್ಎಸ್ಬಿವೈ ಯೋಜನೆ ಅನುಷ್ಠಾನ ಸಂಬಂಧ ಬೆಂಗಳೂರಿನಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳಲ್ಲದೇ ಹೈಟೆಕ್ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಗದಗ ಜಿಲ್ಲೆಯಲ್ಲಿಯೇ 15 ಆಸ್ಪತ್ರೆಗಳನ್ನು ಪಟ್ಟಿ ಮಾಡ ಲಾಗಿದೆ. ತಹಶೀಲ್ದಾರ್, ಪಿಡಿಒ, ಗ್ರಾಮಲೆಕ್ಕಿಗರನ್ನು ಒಳಗೊಂಡ ತಾಲ್ಲೂಕು ಅನುಷ್ಠಾನ ಸಮಿತಿ ಕಾರ್ಡ್ಗಳನ್ನು ಫಲಾನುಭವಿಗಳಿಗೆ ವಿತರಿಸಲಿದೆ. ಜಿಲ್ಲೆಯಲ್ಲೂ ಸಭೆ ನಡೆಸಿ ಯೋಜನೆ ಅನುಷ್ಠಾನಗೊಳಿಸಲಾಗುವುದು’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.