ADVERTISEMENT

ಆದೇಶ ಪ್ರಶ್ನಿಸಿ ಸರ್ಕಾರದ ಮೇಲ್ಮನವಿ

ಮೇಯರ್‌, ಉಪಮೇಯರ್‌ ಚುನಾವಣೆಗೆ ತಡೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳ ಮೇಯರ್‍ ಮತ್ತು ಉಪಮೇಯರ್‌ ಸ್ಥಾನಗಳಿಗೆ ಪ್ರಕಟಿಸಿದ್ದ ಮೀಸಲಾತಿ ಪಟ್ಟಿಗೆ ಮಧ್ಯಂತರ ತಡೆಯಾಜ್ಞೆ ನೀಡಿರುವ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

ಮೇಲ್ಮನವಿಯ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡ ಮುಖ್ಯ ನ್ಯಾಯ­ಮೂರ್ತಿ ಡಿ.ಎಚ್‍‍. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಮೀಸಲಾತಿ ಪಟ್ಟಿ ಪ್ರಶ್ನಿಸಿ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದ ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯ ಅಬ್ದುಲ್‍ ಅಜೀಜ್‍‍ ಅವರಿಗೆ ನೋಟಿಸ್‍‍ ಜಾರಿಗೆ ಆದೇಶ ನೀಡಿದೆ.

ಮಹಾನಗರ ಪಾಲಿಕೆಗಳ ಮೇಯರ್‍‍ ಮತ್ತು ಉಪಮೇ ಯರ್‍‍ ಸ್ಥಾನದ ಚುನಾವಣೆಗೆ ಆಗಸ್ಟ್ 26ರಂದು ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಅದೇ ದಿನ ಹೈಕೋರ್ಟ್‌ನಲ್ಲಿ, ಮೀಸಲಾತಿ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದೆ. ಆದರೆ, ಸುಪ್ರೀಂ ಕೋರ್ಟ್‍‍ ನೀಡಿರುವ ಆದೇಶದ ಅನ್ವಯ ವೇಳಾ ಪಟ್ಟಿ ಪ್ರಕಟವಾದ ದಿನದಿಂದಲೇ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಸರ್ಕಾರ ಮೇಲ್ಮನವಿಯಲ್ಲಿ ವಿವರಣೆ ನಿಡಿದೆ.

ಫಲಿತಾಂಶ ಘೋಷಣೆ ಆಗುವ­ವರೆಗೂ ಚುನಾವಣಾ ಪ್ರಕ್ರಿಯೆ ಜಾರಿ­ಯಲ್ಲಿರುತ್ತದೆ. ಚುನಾವಣಾ ಪ್ರಕ್ರಿಯೆ ಒಮ್ಮೆ ಆರಂಭವಾದ ನಂತರ ಅದಕ್ಕೆ ತಡೆಯಾಜ್ಞೆ ನೀಡಬಾರದು. ಇದನ್ನು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ.

ಹಾಗಾಗಿ, ಚುನಾವಣಾ ಪ್ರಕ್ರಿಯೆಗೆ ತಡೆ ನೀಡುವ ಏಕಸದಸ್ಯ ಪೀಠದ ಆದೇಶ ಸಮರ್ಥನೀಯವಲ್ಲ. ಅಲ್ಲದೆ, ಮೇಯರ್‍‍ ಮತ್ತು ಉಪಮೇಯರ್‍‍ ಹುದ್ದೆಗಳಿಗೆ ಮೀಸಲಾತಿ ಕಲ್ಪಿಸಿ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಪ್ಪು ಎಲ್ಲಿದೆ ಎಂಬು ದನ್ನು ಅರ್ಜಿದಾರ ಅಬ್ದುಲ್‍‍ ಅವರು ಸ್ಪಷ್ಟಪಡಿಸಿಲ್ಲ ಎಂದು ಸರ್ಕಾರ ಮೇಲ್ಮನವಿಯಲ್ಲಿ ವಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.