ಬೆಂಗಳೂರು: ಇಂಡಿ ಶಾಸಕ ಡಾ. ಸಾರ್ವಭೌಮ ಬಗಲಿ, ರಾಮನಗರ ಶಾಸಕ ಕೆ. ರಾಜು ಸೇರಿದಂತೆ ನಾಲ್ವರು ಶಾಸಕರು ಇನ್ನೂ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ತಿಳಿಸಿದರು.
ಇಲ್ಲಿನ ಲೋಕಾಯುಕ್ತ ಕಚೇರಿಯಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರ ಸಲ್ಲಿಸಲು ಜೂನ್ 30 ಅಂತಿಮ ದಿನವಾಗಿತ್ತು. ಅಂದಿನವರೆಗೆ ವಿವರ ಸಲ್ಲಿಸದವರಿಗೆ ಆಗಸ್ಟ್ 30ರವರೆಗೂ ಅವಕಾಶ ಇತ್ತು. ಆದರೆ ನಾಲ್ವರು ಶಾಸಕರು ಇಂದಿನವರೆಗೂ ವಿವರ ಸಲ್ಲಿಸಿಲ್ಲ~ ಎಂದು ತಿಳಿಸಿದರು.
ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರನ್ನು ಪತ್ರಿಕೆಗಳ ಮೂಲಕ ಬಹಿರಂಗಪಡಿಸಲಾಗುವುದು. ವಾರ್ತಾ ಇಲಾಖೆಯ ನಿರ್ದೇಶಕರಿಗೆ ಈ ಕುರಿತು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇಬ್ಬರು ವಿಧಾನ ಪರಿಷತ್ ಸದಸ್ಯರು ಶನಿವಾರ (ಸೆ. 3) ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಆದರೆ ಅವರು ಗಡುವನ್ನು ಮೀರಿರುವ ಕಾರಣ ಅವರ ಹೆಸರನ್ನೂ ಪತ್ರಿಕೆಗಳ ಮೂಲಕ ಬಹಿರಂಗ ಮಾಡಲಾಗುವುದು ಎಂದು ತಿಳಿಸಿದರು.
ಆಸ್ತಿ ವಿವರ ಸಲ್ಲಿಸಲು ವಿಫಲರಾದವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ಅವಕಾಶ ಇದೆ. ಅವರಿಂದ ಬರುವ ಉತ್ತರ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಬಹುದು~ ಎಂದರು.
`ಸ್ವಯಂಪ್ರೇರಿತ ಕ್ರಮ~: `ಡಾ. ಸಾರ್ವಭೌಮ ಬಗಲಿ, ಅವರ ಪುತ್ರ ಸಂಕೇತ ಬಗಲಿ ಮತ್ತು ವಿಜಾಪುರ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಅನಿತಾ ಮಾಂಡ್ರೆ ಅವರು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂಬ ಆರೋಪದ ಕುರಿತು ಸ್ವಯಂ ಪ್ರೇರಿತ ಕ್ರಮ ತೆಗೆದುಕೊಂಡಿದ್ದೇವೆ ಎಂದು ಪಾಟೀಲ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.