ADVERTISEMENT

ಆಸ್ಪತ್ರೆ ಎದುರು ಗಂಟೆಗಟ್ಟಲೇ ನಿಲ್ಲುವ ಶಿಕ್ಷೆ

ಚಿಕಿತ್ಸೆಗಾಗಿ ಗರ್ಭಿಣಿಯರ ಪರದಾಟ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 20:10 IST
Last Updated 20 ಡಿಸೆಂಬರ್ 2013, 20:10 IST

ಹುಬ್ಬಳ್ಳಿ: ಇಲ್ಲಿನ ಚಿಟಗುಪ್ಪಿ ಆಸ್ಪತ್ರೆಯ ಆವರಣದಲ್ಲಿರುವ ಸಂಸದ ಪ್ರಹ್ಲಾದ ಜೋಶಿ ಅವರ ಜನಸಂಪರ್ಕ ಕಚೇರಿ ಎದುರು ಗುರುವಾರ ಮುಂಜಾನೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸಾಲುಗಟ್ಟಿ ನಿಂತಿದ್ದರು. ವಿಶೇಷವೆಂದರೆ ಸಾಲಿನಲ್ಲಿದ್ದವರು ಯಾರೂ ಸಂಸದ ಜೋಶಿ ಅವರ ಬಳಿಗೆ ಅಹವಾಲು ಹೇಳಿಕೊಳ್ಳಲು ಬಂದಿರಲಿಲ್ಲ!

ಬದಲಿಗೆ ಅವರೆಲ್ಲಾ ಸಂಸದರ ಕಚೇರಿಗೆ ತಾಗಿಕೊಂಡೇ ಇರುವ ಚಿಟ­ಗುಪ್ಪಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಬಳಿ ತಪಾಸಣೆಗೆ ಬಂದಿದ್ದ ಗರ್ಭಿಣಿಯರಾಗಿದ್ದರು. ಮಂಗಳ­ವಾರ ಮತ್ತು ಶುಕ್ರವಾರ ಮಧ್ಯಾಹ್ನದವರೆಗೆ ಮಾತ್ರ ಸಿಗುವ ವೈದ್ಯರನ್ನು ಕಾಣುವ ಧಾವಂತ ಅವರಲ್ಲಿತ್ತು.

ಚುಮು ಚುಮು ಚಳಿಯಲ್ಲಿಯೇ ಮುಂಜಾನೆ ಬಂದು ಪಾಳಿಯಲ್ಲಿ ನಿಂತಿದ್ದ ಅವರೆಲ್ಲಾ ಮಧ್ಯಾಹ್ನ ಬಿಸಿಲು ಏರುತ್ತಲೇ ಬಸವಳಿದಿದ್ದರು. ಗದ್ದಲ, ವಾಗ್ವಾದ, ನೂಕುನುಗ್ಗಲು ಸಾಮಾನ್ಯ­ವಾಗಿತ್ತು. ನಾಲ್ಕಾರು ಗಂಟೆ ಕಾಲ ನಿಂತಿದ್ದರೂ ವಿಶ್ರಾಂತಿಗೆ, ಶೌಚಾಲಯಕ್ಕೆ ಅಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ. ಕುಡಿಯಲು ಹನಿ ನೀರಿಗೂ ಹಾಹಾಕಾರವಿತ್ತು.

ಬಿಸಿಲು ಏರುತ್ತಲೇ ಮಗಳನ್ನು ತಪಾಸಣೆಗೆ ಕರೆತಂದಿದ್ದ ಮಂಟೂರು ರಸ್ತೆಯ ನಿವಾಸಿಯೊಬ್ಬರು ತಾಪಕ್ಕೆ ಸುಸ್ತಾಗಿ ಕುಸಿದು ಬಿದ್ದರು. ಕೊನೆಗೆ ಅಕ್ಕಪಕ್ಕದಲ್ಲಿದ್ದವರು ಸಂಸದರ ಕಚೇರಿಯಿಂದ ನೀರು ತಂದುಕೊಟ್ಟು ಅವರನ್ನು ಉಪಚರಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿ ಶುಲ್ಕ ನೀಡಿ ವೈದ್ಯಕೀಯ ಸೌಲಭ್ಯ ಪಡೆಯಲಾಗದ ಬಹುತೇಕ ಬಡವರ ಮನೆಯ ಹೆಣ್ಣು ಮಕ್ಕಳು ಅಲ್ಲಿ ಚಿಕಿತ್ಸೆಗಾಗಿ ಬಂದಿದ್ದರು. ಅವರಲ್ಲಿ ಮೂರು ತಿಂಗಳಿನಿಂದ ದಿನ ತುಂಬಿದ ಗರ್ಭಿಣಿಯರು ಇದ್ದರು.

ವೈದ್ಯರ ಕೊರತೆ: ಚಿಟಗುಪ್ಪಿ ಆಸ್ಪತ್ರೆ­ಯಲ್ಲಿ ಕೇವಲ ಪಾಲಿಕೆ ವ್ಯಾಪ್ತಿಯ ನಿವಾಸಿಗಳ ಚಿಕಿತ್ಸೆಗೆ ಮಾತ್ರ ಅವಕಾಶ­ವಿದೆ. ಆದರೆ ಇಡೀ ಜಿಲ್ಲೆಯ ಹೆಣ್ಣು ಮಕ್ಕಳು ಇಲ್ಲಿ ತಪಾಸಣೆಗೆಂದು ಬರು­ತ್ತಾರೆ. ಇದರಿಂದ ಚಿಕಿತ್ಸೆಗೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಿದರೂ, ವೈದ್ಯರು ಮಾತ್ರ ಅಷ್ಟೇ ಇದ್ದಾರೆ’ ಎಂದು ಆಸ್ಪತ್ರೆಯ ಮುಖ್ಯವೈದ್ಯಾಧಿ­ಕಾರಿ ಡಾ.ಪ್ರಭು ಬಿರಾದಾರ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಪ್ರಸೂತಿ ಹಾಗೂ ಸ್ತ್ರೀರೋಗ ಚಿಕಿತ್ಸಾ ವಿಭಾಗದಲ್ಲಿ ಡಾ. ದಾಕ್ಷಾಯಿಣಿ ರಜೆಯಲ್ಲಿದ್ದ ಕಾರಣ ಶುಕ್ರವಾರ ಡಾ.ರೀಟಾ ವಿಜಯಚಂದ್ರ ಮಾತ್ರ ಚಿಕಿತ್ಸೆ ನೀಡಿದರು. ಇದರಿಂದ ನೂಕುನುಗ್ಗಲು ಸಹಜವಾಗಿಯೇ ಹೆಚ್ಚಿತ್ತು ಎನ್ನುವ ಡಾ.ಬಿರಾದಾರ, ಉಳಿದ ದಿನಗಳಲ್ಲಿ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಬೇರೆ ಬೇರೆ ಕಾರ್ಯಗಳ ನಿರತವಾಗುವ ಕಾರಣ ಸರ್ಕಾರ­ದಿಂದಲೇ ವಾರದಲ್ಲಿ ಎರಡು ದಿನವನ್ನು ತಪಾಸಣೆಗೆ ನಿಗದಿ ಮಾಡಲಾಗಿದೆ. ತಜ್ಞ ವೈದ್ಯರ ನೇಮಕಕ್ಕೆ ಮಹಾನಗರ ಪಾಲಿಕೆ ಸಿದ್ಧವಿದೆ ಆದರೆ ಯಾರೂ ಸಿಗುತ್ತಿಲ್ಲ ಎಂದು ಹೇಳುತ್ತಾರೆ.

ಹೆರಿಗೆ ನೋವಿಗಿಂತ ಕಷ್ಟ...
‘ಹೆರಿಗೆ ನೋವಿನ ದುಪ್ಪಟ್ಟು ಕಷ್ಟವನ್ನು ನಮ್ಮ ಮಕ್ಕಳು ಆಸ್ಪತ್ರೆಗೆ ಅಡ್ಡಾಡುವುದರಲ್ಲಿಯೇ ಅನುಭವಿ­ಸು­ತ್ತಾರೆ. ವಾರವಿಡೀ ಚಿಕಿತ್ಸೆ ನೀಡ­ಲು ಇವರಿಗೆ ಸಮಸ್ಯೆ ಏನು ಎಂದು ಪ್ರಶ್ನಿಸುತ್ತಾರೆ’ ಹಳೇ­ಹುಬ್ಬಳ್ಳಿ­ಯಿಂದ ಮಗಳನ್ನು ಪರೀಕ್ಷೆಗೆ ಕರೆತಂದಿದ್ದ ಸಾವಿತ್ರಿಬಾಯಿ ನೀಲಗುಂದ.

‘ಕೂಲಿ ಕಾರ್ಮಿಕರು, ಉದ್ಯೋಗಿ­ಗಳು ಚಿಕಿತ್ಸೆಗೆ ಬರ­ಬೇಕಾದರೆ ಒಂದು ದಿನ ರಜೆ ಹಾಕಿಯೇ ಬರಬೇಕಿದೆ. ಸ್ಥಳೀಯ ಶಾಸಕರು, ಸಂಸದರ ಮನೆಯ ಸದಸ್ಯರನ್ನು ಚಿಕಿತ್ಸೆಗೆ ಇಲ್ಲಿಗೆ ಕರೆತಂದಿದ್ದರೆ ನಾವು ಪಡುವ ಸಂಕಷ್ಟ ಅವರಿಗೂ ಅರ್ಥವಾಗು­ತ್ತಿತ್ತು’ ಎಂದು ಸಾವಿತ್ರಿಬಾಯಿ ಆಕ್ರೋಶ ವ್ಯಕ್ತಪಡಿಸುತ್ತಾರೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT