ADVERTISEMENT

ಇಂದಿನಿಂದ ಬಹುರೂಪಿ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 7 ಜನವರಿ 2013, 19:59 IST
Last Updated 7 ಜನವರಿ 2013, 19:59 IST
ಮೈಸೂರಿನ ರಂಗಾಯಣದ ಆವರಣವು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕಾಗಿ ಸಿಂಗಾರಗೊಂಡಿದೆ
ಮೈಸೂರಿನ ರಂಗಾಯಣದ ಆವರಣವು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕಾಗಿ ಸಿಂಗಾರಗೊಂಡಿದೆ   

ಮೈಸೂರು: ನಗರದಲ್ಲಿ ಜನವರಿ 8 ರಿಂದ 14 ರ ವರಿಗೆ ನಡೆಯುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕಾಗಿ ರಂಗಾಯಣ ಸಿಂಗಾರಗೊಂಡಿದೆ.
ರಂಗಾಯಣ ಮತ್ತು ಕಲಾಮಂದಿರದ ಆವರಣದಲ್ಲಿ ಸ್ವಾಗತ ಕಮಾನುಗಳು ತಲೆ ಎತ್ತಿವೆ. ಪುಸ್ತಕ, ಕರಕುಶಲ ಮತ್ತು ದೇಸಿ ತಿಂಡಿ ತಿನಿಸುಗಳ ಮಳಿಗೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ರಂಗಾಯಣದ ಭೂಮಿಗೀತ ರಂಗಮಂದಿರ, ವನರಂಗ ಬಯಲು ರಂಗಮಂದಿರ, ಕಲಾಮಂದಿರದ ವೇದಿಕೆ ನಾಟಕಗಳ ಪ್ರದರ್ಶನಕ್ಕೆ ಸಜ್ಜಾಗಿವೆ.

`ಜೀವ-ಜಲ-ಜೀವನ' ಆಶಯ ಇಟ್ಟುಕೊಂಡು ಏಳು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಕನ್ನಡ, ತಮಿಳು, ಮಲಯಾಳಂ, ಮರಾಠಿ ಮತ್ತು ಹಿಂದಿ ಸೇರಿದಂತೆ 21 ನಾಟಕಗಳು ಪ್ರದರ್ಶನಗೊಳ್ಳಲಿವೆ. ಇಷ್ಟೇ ಅಲ್ಲದೆ ರಂಗಾಯಣದ ಶ್ರೀರಂಗದಲ್ಲಿ ಚಲನಚಿತ್ರೋತ್ಸವ, ಸಾಕ್ಷ್ಯಚಿತ್ರ ಪ್ರದರ್ಶನವಿರುತ್ತದೆ.
ಕಿಂದರಿ ಜೋಗಿ ಆವರಣದಲ್ಲಿ ಜಾನಪದ ಕಲೆಗಳು ಮತ್ತು ಬೀದಿ ನಾಟಕಗಳ ಪ್ರದರ್ಶನವಿರುತ್ತದೆ. ಶ್ರೀರಂಗ ವೇದಿಕೆಯಲ್ಲಿ ಜೀವ-ಜಲ-ಜೀವನ ವಿಚಾರ ಸಂಕಿರಣ, ರಂಗಾಯಣ ಒಂದು ಅವಲೋಕನ ನಡೆಯಲಿದೆ. ಅಲ್ಲದೇ ಪುಸ್ತಕ ಪರಿಶೆ, ಒಂದು ಸಾವಿರ ನಾಟಕ ಕೃತಿಗಳ ಪ್ರದರ್ಶನ, ಶಾಲಾ-ಕಾಲೇಜು ಮತ್ತು ಯುವಜನರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಈ ಉತ್ಸವವನ್ನು ಜ.8 ರಂದು ಸಂಜೆ 5 ಗಂಟೆಗೆ ವನರಂಗದಲ್ಲಿ   ಸಂಸ್ಕೃತಿ ಚಿಂತಕ ಅಶೋಕ ವಾಜಪೇಯಿ ಉದ್ಘಾಟಿಸುವರು. ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅಧ್ಯಕ್ಷತೆ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.