ಬೆಂಗಳೂರು: ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಚೀನಾದ ಡಾಲಿಯನ್ಗೆ ತೆರಳಲಿದ್ದಾರೆ.
ಸಿಎಂ ಆದ ಬಳಿಕ ಸಿದ್ದರಾಮಯ್ಯ ಕೈಗೊಳ್ಳುತ್ತಿರುವ ಪ್ರಥಮ ವಿದೇಶ ಪ್ರವಾಸ ಇದು.
ಬುಧವಾರದಿಂದ ಮೂರು ದಿನಗಳ ಕಾಲ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶ ನಡೆಯಲಿದ್ದು, ಸಿದ್ದರಾಮಯ್ಯ ಅವರು ಸೋಮವಾರ ರಾತ್ರಿ ಸಿಂಗಾಪುರ ಮತ್ತು ಶಾಂಘೈ ಮೂಲಕ ಡಾಲಿಯನ್ಗೆ ತೆರಳಲಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಕೈಗಾರಿಕಾ ಕ್ಷೇತ್ರದ ಹಲವು ನಾಯಕರನ್ನು ಭೇಟಿಯಾಗಲಿದ್ದಾರೆ. ಮುಖ್ಯಮಂತ್ರಿ ಜತೆ 14 ಸದಸ್ಯರ ವ್ಯಾಣಿಜ್ಯ ನಿಯೋಗ ಮತ್ತು ಎಂಟು ಮಂದಿ ಹಿರಿಯ ಅಧಿಕಾರಿಗಳು ತೆರಳಲಿದ್ದಾರೆ.
ಸುಜ್ಲಾನ್ ಎನರ್ಜಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ತುಳಸಿ ತಂತಿ, ಎ.ಬಿ.ಎ.ಐ ಸಂಸ್ಥೆ ಅಧ್ಯಕ್ಷ ಬಿರೇನ್ ಘೋಷ್, ಕಾರ್ಗಿಲ್ ಇಂಡಿಯಾ ಕಂಪೆನಿಯ ಸೀರಜ್ ಚೌಧರಿ ಸೇರಿದಂತೆ ಮಾಹಿತಿ ತಂತ್ರಜ್ಞಾನ, ಜವಳಿ ಕ್ಷೇತ್ರದ ಉದ್ಯಮಿಗಳು ಸಿಎಂ ಜತೆಗಿರುವರು.
ಸಿಎಂ ಪ್ರಧಾನ ಕಾರ್ಯದರ್ಶಿ ಡಿ.ಎನ್. ನರಸಿಂಹರಾಜು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಎಂ. ಮಹೇಶ್ವರರಾವ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರಘುರಾಮ್ ಮುಖ್ಯಮಂತ್ರಿ ಅವರ ಜತೆಗಿರುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.