ADVERTISEMENT

ಇನ್ನೊಬ್ಬರ ಮನೆ ಬಾಗಿಲಿಗೆ ಕಳುಹಿಸಬೇಡಿ

ದೇವೇಗೌಡ– ಕುಮಾರಸ್ವಾಮಿ ಒಕ್ಕೊರಲಿನ ಮನವಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 19:30 IST
Last Updated 1 ಜುಲೈ 2017, 19:30 IST
ದಾವಣಗೆರೆಯಲ್ಲಿ ಶನಿವಾರ ನಡೆದ ವಾಲ್ಮೀಕಿ ಜನತೋತ್ಸವ ಹಾಗೂ ರಾಜ್ಯ ಮಟ್ಟದ ಜೆಡಿಎಸ್‌ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಶಾಸಕ ಚಿಕ್ಕಮಾದು, ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದರು.
ದಾವಣಗೆರೆಯಲ್ಲಿ ಶನಿವಾರ ನಡೆದ ವಾಲ್ಮೀಕಿ ಜನತೋತ್ಸವ ಹಾಗೂ ರಾಜ್ಯ ಮಟ್ಟದ ಜೆಡಿಎಸ್‌ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಶಾಸಕ ಚಿಕ್ಕಮಾದು, ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದರು.   

ದಾವಣಗೆರೆ: ಮುಂಬರುವ ವಿಧಾನ ಸಭಾ ಚುನಾವಣೆಯ ಮತ ಪ್ರಚಾರಕ್ಕೆ  ದಾವಣಗೆರೆಯಲ್ಲಿ ಜೆಡಿಎಸ್‌ ಶನಿವಾರ ಪರೋಕ್ಷವಾಗಿ ಚಾಲನೆ ನೀಡಿತು.

‘ಅಧಿಕಾರಕ್ಕಾಗಿ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗುವಂತೆ ಮಾತ್ರ ಮಾಡ ಬೇಡಿ. ನಮಗೇ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನೀಡಿ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇ ಗೌಡ ಸೇರಿದ್ದ ಸಹಸ್ರಾರು ಜನರಲ್ಲಿ ಮನವಿ ಮಾಡಿದರು. ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರ ಸ್ವಾಮಿ ಇದನ್ನು ಇನ್ನಷ್ಟು ಒತ್ತಿ ಹೇಳಿದರು. 

ನಗರದ ಹೈಸ್ಕೂಲ್‌ ಮೈದಾನದಲ್ಲಿ ಜೆಡಿಎಸ್‌ ಪರಿಶಿಷ್ಟ ಪಂಗಡ ಹಮ್ಮಿ ಕೊಂಡಿದ್ದ ಮಹರ್ಷಿ ವಾಲ್ಮೀಕಿ ಜನತೋತ್ಸವ ಹಾಗೂ ರಾಜ್ಯ ಮಟ್ಟದ ಜೆಡಿಎಸ್‌ ಸಮಾವೇಶದಲ್ಲಿ ಅಪ್ಪ–ಮಗ ಇಬ್ಬರೂ, ‘ಕಾಂಗ್ರೆಸ್‌, ಬಿಜೆಪಿ ಎರಡಕ್ಕೂ ಒಂದೊಂ ದು ಅವಕಾಶ ಕೊಟ್ಟಿದ್ದೀರಿ. ಪರೀಕ್ಷೆ ಮಾಡುವುದಕ್ಕಾದರೂ ನಮಗೆ ಒಮ್ಮೆ ಆಶೀರ್ವಾದ ಮಾಡಿ’ ಎಂದು ಕೈ ಮುಗಿದು ಕೇಳಿಕೊಂಡರು.

ADVERTISEMENT

‘ಚಂದ್ರಶೇಖರ್‌ ಪ್ರಧಾನ ಮಂತ್ರಿಯಾಗಿದ್ದಾಗ ದೇವೇಗೌಡ ಅವರ ಮುಂದೆ ಸಚಿವ ಸ್ಥಾನದ ಅವಕಾಶ ಇತ್ತು. ಆದರೆ, ಅವರು ಅದನ್ನು ನಿರಾಕರಿಸಿ, ವಾಲ್ಮೀಕಿ ನಾಯಕ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕೆ ಅಧಿಕಾರವನ್ನು ಬಳಸಿಕೊಂಡರು. ಮುಂಬರುವ ಚುನಾವಣೆ ದೇವೇಗೌಡರ ಕೊನೆಯ ಹೋರಾಟ. ಅವರ ಋಣ ತೀರಿಸಲು ನೀವು ಸಹಕರಿಸಿ’ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಅನುಷ್ಠಾನಗೊಳಿಸುವ ಯೋಜನೆಗಳ ಪಟ್ಟಿ ಮಾಡಿದ ಅವರು, ‘ರೈತರ ಸಾಲ ಸಂಪೂರ್ಣ ಮನ್ನಾ, 55 ವರ್ಷ ದಾಟಿದ ರೈತರಿಗೆ ₹ 2 ಸಾವಿರ ಮಾಸಾಶನ, ಬಿತ್ತನೆ ಬೀಜ, ಗೊಬ್ಬರ ಉಚಿತವಾಗಿ ವಿತರಣೆ, ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿ ದ್ದೇನೆ. ಇಡೀ ದೇಶಕ್ಕೆ ಮಾದರಿ ಆಡಳಿತ ನೀಡುವೆ’ ಎಂದು ಭರವಸೆ ನೀಡಿದರು.

‘ಮನಸ್ಸಿನಲ್ಲಿ ತುಂಬಾ ಆವೇಶ ಇದೆ. ಎಲ್ಲವನ್ನೂ ಈಗಲೇ ಹೇಳುವುದಿಲ್ಲ. ಇದು ಆರಂಭ; ಹಲವಾರು ಸಮಾವೇಶಗಳನ್ನು ಮಾಡಲಿದ್ದೇನೆ. ಪ್ರಾದೇಶಿಕ ಪಕ್ಷ ಬೇಕೆ? ಬೇಡವೇ? ಎಂಬುದು ನಿರ್ಣಯವಾಗುವ ಕಾಲಘಟ್ಟ ಇದು. ನೀವು ಶಕ್ತಿ ತುಂಬಿದರೆ ಜೆಡಿಎಸ್‌ ಉಳಿಯುತ್ತೆ. ಇದಕ್ಕೆ ಕಟಿಬದ್ಧ ರಾಗಿದ್ದೀರಾ? ಹಾಗಾದರೆ ಕೈ ಎತ್ತಿ’ ಎಂದಾಗ ಜನ ದೀರ್ಘ ಉದ್ಗಾರದ ಮೂಲಕ ಬೆಂಬಲ ಸೂಚಿಸಿದರು.

ಅಪಘಾತ: ಸಾವು
ಮಧುಗಿರಿ:
ತಾಲ್ಲೂಕಿನ ಬಡವನಹಳ್ಳಿ ರಾಷ್ಟೀಯ ಹೆದ್ದಾರಿ 234 ರಲ್ಲಿ ಶನಿವಾರ ಕಾರು ಪಲ್ಟಿ ಹೊಡೆದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಜೆಡಿಎಸ್ ಘಟಕದ ಅಧ್ಯಕ್ಷ ದೇವರಾಜು (44) ಮೃತಪಟ್ಟಿದ್ದಾರೆ. ದಾವಣಗೆರೆಯಲ್ಲಿ ಪಕ್ಷ ಆಯೋಜಿಸಿದ್ದ ಪರಿಶಿಷ್ಟ ಪಂಗಡದ ಸಮಾವೇಶಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.