ಸಕಲೇಶಪುರ: ಸಕಲೇಶಪುರ– ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದಲ್ಲಿ ಗುರುವಾರ ಮಧ್ಯಾಹ್ನ ಪುನಃ ಮಣ್ಣು ಕುಸಿದು, ರೈಲು ಮಾರ್ಗ ಬಂದ್ ಆಗಿದ್ದರಿಂದ ಈದ್ಗೆ ಹೊರಟವರಿಗೆ ತೀವ್ರ ನಿರಾಸೆಯಾಯಿತು.
ಶುಕ್ರವಾರ ಚಂದ್ರ ದರ್ಶನವಾದರೆ ಕರಾವಳಿ ಹಾಗೂ ಕೇರಳದಲ್ಲಿ ಈದ್– ಉಲ್– ಫಿತ್ರ್ ಹಬ್ಬ ಆಚರಿಸಲಾಗುತ್ತದೆ. ಹಬ್ಬದ ಸಲುವಾಗಿ ಬೆಂಗಳೂರು, ಹಾಸನ ಭಾಗದ ಮುಸಲ್ಮಾನರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸಿದ್ದರು.
ರೈಲ್ವೆ ಸಿಬ್ಬಂದಿ ಕೂಡಲೇ ಮಣ್ಣು ತೆರವು ಕಾರ್ಯಾಚರಣೆ ನಡೆಸಿದರೂ ಸಂಜೆ 4 ಗಂಟೆವರೆಗೂ ಮುಗಿಯಲಿಲ್ಲ. ಸಂಜೆ 4.30ಕ್ಕೆ ಸಕಲೇಶಪುರ ನಿಲ್ದಾಣಕ್ಕೆ ಮರಳಿತು.
ಸಕಲೇಶಪುರದಲ್ಲಿ ಪ್ರಯಾಣಿಕರಿಗೆ ‘ಇಲ್ಲಿಯೇ ಇಳಿಯಿರಿ ಟಿಕೆಟ್ ಹಣ ಹಿಂದಿರುಗಿಸಲಾಗುವುದು’ ಎಂದು ರೈಲ್ವೆ ಅಧಿಕಾರಿಗಳು ಹೇಳಿದರು. ಇದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು. ಸುಮಾರು ಒಂದು ಸಾವಿರ ಪ್ರಯಾಣಿಕರಿದ್ದರು. ‘ಮಾರ್ಗ ಮಧ್ಯೆ ನಿಲ್ಲಿಸಿ ಇಳಿಯಿರಿ ಎಂದರೆ ಎಲ್ಲಿಗೆ ಹೋಗುವುದು’ ಎಂದು ಅಧಿಕಾರಿಗಳ ಜತೆಗೆ ವಾಗ್ವಾದ ನಡೆಸಿದರು.
**
ಉಕ್ಕುತ್ತಿರುವ ಜಲ
ಸಕಲೇಶಪುರ: ವಾರದಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಪಶ್ಚಿಮಘಟ್ಟದ ಅಂಚಿನಲ್ಲಿರುವ ತಾಲ್ಲೂಕಿನ ಅತ್ತಿಬೀಡು ಗ್ರಾಮದ ರೈತರೊಬ್ಬರ ಮನೆಯ ಅಂಗಳದಲ್ಲಿ ಜಲ ಉಕ್ಕುತ್ತಿದ್ದು, ಸುತ್ತಲೂ ತೊರೆಯಂತೆ ಹರಿಯುತ್ತಿದೆ.
‘ಕಾಲಿಟ್ಟರೆ ಮಣ್ಣಿನಲ್ಲಿ ಹೂತುಕೊಳ್ಳುವಂತೆ ಭೂಮಿ ಮೆತ್ತಗಾಗಿದೆ. ಇಲ್ಲಿ ಮನೆ ಕಟ್ಟಿ 20 ವರ್ಷಗಳೇ ಕಳೆದಿದೆ. ಇದುವರೆಗೂ ಈ ಪ್ರಮಾಣದಲ್ಲಿ ಮಳೆ ಬಿದ್ದಿಲ್ಲ’ ಎಂದು ರೈತ ಎಚ್.ವೈ.ಪರಮೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.