ADVERTISEMENT

ಈ ಅಧಿವೇಶನದಲ್ಲೇ ಸಭಾಪತಿ ಭವಿಷ್ಯ ನಿರ್ಣಯ

ಅವಿಶ್ವಾಸ ನಿರ್ಣಯ ಮಂಡನೆ l ಜಿಡಿಎಸ್‌ ತಟಸ್ಥ ನಿಲುವು l ತೆರವಾಗುವ ಸ್ಥಾನಕ್ಕೆ ನಾಲ್ವರ ಹೆಸರು ಮುಂಚೂಣಿಯಲ್ಲಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 19:30 IST
Last Updated 12 ಜೂನ್ 2017, 19:30 IST
ವಿಧಾನಸಭೆಯ ಅಧಿವೇಶನಕ್ಕೆ ಸೋಮವಾರ ಹೆಚ್ಚಿನ ಶಾಸಕರು ಬರಲಿಲ್ಲ. ಹೀಗಾಗಿ ಆಡಳಿತ ಹಾಗೂ ವಿರೋಧ ಪಕ್ಷದ ಬಹುತೇಕ ಸೀಟುಗಳು ಖಾಲಿಯಾಗಿದ್ದವು                                                 –ಪ್ರಜಾವಾಣಿ ಚಿತ್ರ
ವಿಧಾನಸಭೆಯ ಅಧಿವೇಶನಕ್ಕೆ ಸೋಮವಾರ ಹೆಚ್ಚಿನ ಶಾಸಕರು ಬರಲಿಲ್ಲ. ಹೀಗಾಗಿ ಆಡಳಿತ ಹಾಗೂ ವಿರೋಧ ಪಕ್ಷದ ಬಹುತೇಕ ಸೀಟುಗಳು ಖಾಲಿಯಾಗಿದ್ದವು –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಧಾನಮಂಡಲ ಅಧಿವೇಶನವನ್ನು ಇದೇ 21ರವರೆಗೆ ವಿಸ್ತರಿಸಿರುವುದರಿಂದ ವಿಧಾನ ಪರಿಷತ್‌  ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಭವಿಷ್ಯ ಈ ಅಧಿವೇಶನದಲ್ಲೇ ನಿರ್ಧಾರವಾಗಲಿದೆ.

ಶಂಕರಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಅವಿಶ್ವಾಸ ನಿರ್ಣಯ ಮಂಡಿಸುವ ಸೂಚನೆಯನ್ನು ಕಾಂಗ್ರೆಸ್ ಸದಸ್ಯರು ಮಾರ್ಚ್‌ 31ರಂದು ವಿಧಾನ ಪರಿಷತ್‌ ಕಾರ್ಯದರ್ಶಿಗೆ ಸಲ್ಲಿಸಿದ್ದರು. ಅದು ಮಂಗಳವಾರ (ಜೂನ್ 13) ಪರಿಷತ್ತಿನಕಾರ್ಯಕಲಾಪ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

‘ನಿರ್ಣಯ ಪ್ರಸ್ತಾಪಿಸಲು 10 ಮಂದಿ ಸದಸ್ಯರು ಎದ್ದುನಿಂತು ಬೆಂಬಲ ಸೂಚಿಸಬೇಕು. ಇದಾದ 5 ದಿನದೊಳಗೆ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಆಗಲೂ ಸಭಾಪತಿ ರಾಜೀನಾಮೆ ನೀಡಿದಿದ್ದರೆ ಅವಿಶ್ವಾಸವನ್ನು ಮತಕ್ಕೆ ಹಾಕಲಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯರೊಬ್ಬರು ಮಾಹಿತಿ ನೀಡಿದರು.

ADVERTISEMENT

ಶಂಕರಮೂರ್ತಿ ಅವರಿಂದ ತೆರವಾಗುವ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ವಿ.ಎಸ್. ಉಗ್ರಪ್ಪ, ಮೋಟಮ್ಮ, ಕೆ.ಸಿ. ಕೊಂಡಯ್ಯ, ಪ್ರತಾಪಚಂದ್ರ ಶೆಟ್ಟಿ ಅವರ ಹೆಸರುಗಳು ಮುಂಚೂಣಿಯಲ್ಲಿದೆ.

ಜೆಡಿಎಸ್ ತಟಸ್ಥ: ಶಂಕರಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸುವ ವಿಚಾರದಲ್ಲಿ ಸದ್ಯ ಜೆಡಿಎಸ್ ತಟಸ್ಥವಾಗಿದೆ. ‘ಮಂಗಳವಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ಅವಿಶ್ವಾಸ ಮತದಾನಮಾಡುವ ಸಂದರ್ಭ ಬಂದರೆ ಆಗ ನಮ್ಮ ನಿಲುವು ತಿಳಿಸುತ್ತೇವೆ’
ಎಂದು ಜೆಡಿಎಸ್ ಸದಸ್ಯರೊಬ್ಬರು ತಿಳಿಸಿದರು.

ಈ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರನ್ನು ಮಂಗಳವಾರ ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
****
21ರವರೆಗೆ ವಿಸ್ತರಣೆ

ಬೆಂಗಳೂರು: ವಿಧಾನಸಭೆ ಅಧಿವೇಶನವನ್ನು ಇದೇ 21ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಕೆ.ಬಿ. ಕೋಳಿವಾಡ ವಿಧಾನಸಭೆಯಲ್ಲಿ ಸೋಮವಾರ ಪ್ರಕಟಿಸಿದರು.

16ರವರೆಗೆ ಇಲಾಖಾ ಬೇಡಿಕೆಗಳ ಮೇಲೆ ಚರ್ಚೆ ನಡೆಯಲಿದ್ದು, 19ರಂದು ಸಚಿವರು ಉತ್ತರ ನೀಡಲಿದ್ದಾರೆ. 20ರಂದು ಮುಖ್ಯಮಂತ್ರಿ ಉತ್ತರ ಕೊಡುವರು. 21ರಂದು ಮಸೂದೆಗಳನ್ನು ಮಂಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
****
ಬಾಲಕಾರ್ಮಿಕರ ಮಾಹಿತಿಗೆ ಆ್ಯಪ್‌

ಬೆಂಗಳೂರು: ‘ರಾಜ್ಯದಲ್ಲಿ ಬಾಲಕಾರ್ಮಿಕರ ಪತ್ತೆಗೆ ಹಾಗೂ ಅವರ ಬಗ್ಗೆ ಮಾಹಿತಿ ಪಡೆಯಲು ಆ್ಯಪ್‌ ಸಿದ್ಧಪಡಿಸಿದ್ದೇವೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ ಅವರ ಪ್ರಶ್ನೆಗೆ ಅವರು ಉತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.