ADVERTISEMENT

`ಉಡುದಾರದ ಸಿ.ಎಂ'

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ಹೈಕಮಾಂಡ್ ಸಮನ್ವಯ ಸಮಿತಿಯ ನೆಪದಲ್ಲಿ ಮೂಗುದಾರ ಹಾಕಲು ಹೊರಟಿದೆ ಎನ್ನುವ ಬಿಜೆಪಿಯ ಜಗದೀಶ ಶೆಟ್ಟರ್ ಅವರ ಆರೋಪ ವಿಧಾನಸಭೆಯಲ್ಲಿ ಮಂಗಳವಾರ ಸ್ವಾರಸ್ಯಕರ ಚರ್ಚೆಗೆ ಗ್ರಾಸ ನೀಡಿತು.

`ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳಾಗಿದೆ. ಆಗಲೇ ಸಮನ್ವಯ ಸಮಿತಿ ರಚನೆ ಬಗ್ಗೆ ಹೇಳಿಕೆಗಳು ಬರುತ್ತಿವೆ. ಇಲ್ಲೇನು ಎರಡು ಪಕ್ಷಗಳ ಸರ್ಕಾರ ಇದೆಯೇ? ಯಾವ ಕಾರಣಕ್ಕೆ ಈ ನಿಯಂತ್ರಣ' ಎಂದು ಶೆಟ್ಟರ್ ಪ್ರಶ್ನೆ ಮಾಡಿದರು. ಇದರಿಂದ ಸಿಟ್ಟಾದ ಕಾಂಗ್ರೆಸ್ ಸದಸ್ಯರು, `ಸಮನ್ವಯ ಸಮಿತಿ ರಚಿಸಿದರೆ ನಿಮಗೇನು ಕಷ್ಟ' ಎಂದು ಪ್ರಶ್ನಿಸಿದರು.

ಇದನ್ನು ಸಚಿವ ಆರ್.ವಿ.ದೇಶಪಾಂಡೆ ಏರುಧ್ವನಿಯಲ್ಲೇ ಕೇಳಿದರು. ಇದಕ್ಕೆ ಜೆಡಿಎಸ್‌ನ ರೇವಣ್ಣ ಮಾತನಾಡಿ, `ನಮಗೇನೂ ಕಷ್ಟ ಇಲ್ಲ. ಆದರೆ, ಸಿದ್ದರಾಮಯ್ಯ ಅವರನ್ನು ಅವಧಿಗೂ ಮುನ್ನವೇ ಅಧಿಕಾರದಿಂದ ಕೆಳಗಿಳಿಸುವ ಮುನ್ಸೂಚನೆ ಇದು. ಅವರು ಐದು ವರ್ಷ ಅಧಿಕಾರದಲ್ಲಿ ಇರಲಿ ಎನ್ನುವ ಆಸೆ ನಮ್ಮದು' ಎಂದು ಚಟಾಕಿ ಹಾರಿಸಿದರು.

ದೇಶಪಾಂಡೆ ಮಾತನಾಡಿ, `ಐದು ವರ್ಷ ಏಕೆ? ಹತ್ತು ವರ್ಷ ಅಧಿಕಾರದಲ್ಲಿ ಇರಲಿ ಅಂಥ ಹೇಳಿ' ಎಂದು ರೇವಣ್ಣ ಅವರನ್ನು ಕೆಣಕಿದರು. ಹೀಗೆ ಚರ್ಚೆ ನಡೆಯುತ್ತಿದ್ದಾಗ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಮಾತನಾಡಿ, `ನಮ್ಮ ಪಕ್ಷ ಮುಖ್ಯಮಂತ್ರಿಗೆ  ಮೂಗುದಾರವೂ ಹಾಕಿಲ್ಲ, ಶಿವದಾರವೂ ಹಾಕಿಲ್ಲ. ನೀವ್ಯಾಕೆ ಕಿರುಚಾಡುತ್ತೀರಿ' ಎಂದು ಬಿಜೆಪಿ ಸದಸ್ಯರನ್ನು ಕೆಣಕಿದರು.

ಇದಕ್ಕೆ ಬಿಜೆಪಿಯ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿ, `ಸಿದ್ದರಾಮಯ್ಯ ಮೂಗುದಾರದ ಮುಖ್ಯಮಂತ್ರಿಯೂ ಅಲ್ಲ, ಶಿವದಾರದ ಮುಖ್ಯಮಂತ್ರಿಯೂ ಅಲ್ಲ. ಅವರು ಉಡುದಾರದ ಮುಖ್ಯಮಂತ್ರಿ. ಹೀಗಾಗಿ ಅವರು ಯಾರ ಕೈಗೂ ಸಿಗುವುದಿಲ್ಲ' ಎಂದು ಹಾಸ್ಯಚಟಾಕಿ ಹಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.