ADVERTISEMENT

ಉರುಳಿಗೆ ಸಿಲುಕಿ ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST

ಸಿದ್ದಾಪುರ (ಉತ್ತರ ಕನ್ನಡ): ತಾಲ್ಲೂಕಿನ ಕ್ಯಾದಗಿ ಅರಣ್ಯ ವಲಯದ ವ್ಯಾಪ್ತಿಯ ಕಲ್ಕಣಿ ಸಮೀಪದ ಕಾಡಿನಲ್ಲಿ, ಬೇಟೆಗಾರರು ಹಾಕಿದ್ದ ತಂತಿಯ ಉರುಳಿಗೆ ಸಿಲುಕಿದ ಚಿರತೆಯೊಂದು ಭಾನುವಾರ ಸಂಜೆ ಮೃತಪಟ್ಟಿದೆ.

ಅಂದಾಜು ಒಂದೂವರೆ ವರ್ಷ ವಯಸ್ಸಿನ ಈ ಚಿರತೆಯು ಭಾನುವಾರ ನಸುಕಿನಲ್ಲಿ ಉರುಳಿಗೆ ಸಿಲುಕಿತ್ತು ಎನ್ನಲಾಗಿದ್ದು, ಅದರ ಕೂಗನ್ನು ಕೇಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯು, ವನ್ಯಜೀವಿ ಸಂರಕ್ಷಣಾ ಇಲಾಖೆಯ ಅಧಿಕಾರಿಗಳು ಹಾಗೂ ಅರಿವಳಿಕೆ ತಜ್ಞರನ್ನು ಕರೆಸಿದರು.

ಆದರೆ, ಸೊಂಟಕ್ಕೆ ತಂತಿ ಸುತ್ತಿಕೊಂಡು ತೀವ್ರ ನಿತ್ರಾಣಗೊಂಡಿದ್ದ ಚಿರತೆಯು ಪರಿಶೀಲನೆ ಸಂದರ್ಭದಲ್ಲಿಯೇ ಅಸುನೀಗಿತು. ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ವನ್ಯಜೀವಿ ವಿಭಾಗಕ್ಕೆ ಕಳೇಬರವನ್ನು ಒಯ್ಯಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.